Pernankila: ಬಿಂಬ ಪ್ರತಿಷ್ಠೆ ಸಂಪನ್ನ , ಭಕ್ತರಿಗೆ ಅನ್ನಪ್ರಸಾದ; ಶಿಲ್ಪಕಲೆ ಆಕರ್ಷಣೆ
ಗಣಪತಿ ದೇವರಿಗೆ ಇಷ್ಟವಾದ ಸಹಸ್ರಾರು ಸಂಖ್ಯೆಯಲ್ಲಿ ಅಪ್ಪದ ಸೇವೆ ನಡೆಯುತ್ತಿದೆ
Team Udayavani, Mar 26, 2024, 10:18 AM IST
ಉಡುಪಿ: ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ – ಮಹಾಗಣಪತಿ ದೇವಾಲಯದಲ್ಲಿ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಪ್ರಯುಕ್ತ ಪುಣ್ಯಾಹ ವಾಚನ, ಗಣಯಾಗ, ಶ್ರೀ ಮಹಾ ಗಣಪತಿ ದೇವರ ಸನ್ನಿಧಿಯಲ್ಲಿ ಕಲಶಾಭಿಷೇಕ, ಬ್ರಹ್ಮಕುಂಭಾಭಿಷೇಕ, ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಾನದಲ್ಲಿ ಸಾಮಾನ್ಯ ಪ್ರಾಯಶ್ಚಿತ್ತ ಹೋಮ, ಶ್ರೀ ಮಹಾಲಿಂಗೇಶ್ವರ ದೇವರ ಬಿಂಬ ಪ್ರತಿಷ್ಠೆ, ಅಷ್ಟಬಂಧ ಪ್ರತಿಷ್ಠೆ ಸಂಪನ್ನಗೊಂಡಿತು.
ಊರ, ಪರ ಊರಿನ ಸಾವಿರಾರು ಮಂದಿ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಧಾರ್ಮಿಕ ಕಾರ್ಯಕ್ರಮ ಪ್ರಯುಕ್ತ ದಿಶಾಹೋಮ, ಬಲಿಶಿಲಾ ಪ್ರತಿಷ್ಠೆ, ಅಧಿವಾಸ ಹೋಮ, ಧ್ವಜಕಲಶಾಭಿಷೇಕ, ಭೂತರಾಜರ ಪೂಜೆ ನಡೆಯಿತು.
ಸೋಮವಾರ ಹನ್ನೆರಡು ಸಾವಿರಕ್ಕೂ ಮಿಕ್ಕ ಭಕ್ತರು ರವಿವಾರ ಮಧ್ಯಾಹ್ನ ಮತ್ತು ರಾತ್ರಿ 26 ಸಾವಿರಕ್ಕೂ ಮಿಕ್ಕ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರೆ 35 ಸಾವಿರಕ್ಕೂ ಭಕ್ತರು ದೇವರ ದರ್ಶನ ಪಡೆದರು. ಪ್ರತಿನಿತ್ಯ ಗಣಪತಿ ದೇವರಿಗೆ ಇಷ್ಟವಾದ ಸಹಸ್ರಾರು ಸಂಖ್ಯೆಯಲ್ಲಿ ಅಪ್ಪದ ಸೇವೆ ನಡೆಯುತ್ತಿದೆ. ತಾಮ್ರದ ಕಲಶ, ರಜತ ಕಲಶ ಕೂಡ ಬಹಳಷ್ಟು ಸಂಖ್ಯೆಯಲ್ಲಿ ಸೇವೆ
ನಡೆಯುತ್ತಿದ್ದು ಇದರೊಂದಿಗೆ ಇನ್ನಿತರ ದೇವರ ಸೇವೆಗಳು ನಡೆಯುತ್ತಿವೆ.
ನಿತ್ಯ ಭಕ್ತರಿಗೆ ಪಾನೀಯ ವಿತರಣೆ
ನಿತ್ಯ ಬೆಳಗ್ಗೆಯಿಂದ ರಾತ್ರಿಯವರೆಗೆ ಎಳ್ಳು, ರಾಗಿ, ಲಿಂಬು, ಹಣ್ಣು ಹಂಪಲುಗಳ ಪಾನೀಯವನ್ನು ಭಕ್ತರಿಗೆ ಉಚಿತವಾಗಿ
ನೀಡಲಾಗುತ್ತಿದೆ. ಈ ಎಲ್ಲ ಜ್ಯೂಸ್ ಗಳನ್ನು ಬೆಲ್ಲ , ಕರಿಮೆಣಸುಗಳಿಂದ ತಯಾರಿಸಲಾಗುತ್ತಿದೆ. ಯಜ್ಞ ನಾರಾಯಣ ಭಟ್ ಅವರ ಸೇವಾರ್ಥವಾಗಿ ಸೋಮವಾರ ಮೈಸೂರಿನಿಂದ ತರಿಸಿದ ಗಣಪತಿ ದೇವರ ಪ್ರಿಯವಾದ ಹಣ್ಣು ಬೇಲದ ಹಣ್ಣಿನ ಪಾನೀಯವನ್ನು ಭಕ್ತರಿಗೆ ವಿತರಿಸಲಾಯಿತು.
ಶಿಲ್ಪ ಕಲೆ ಆಕರ್ಷಣೆ
ದೇವಸ್ಥಾನದ ಕಲ್ಲು ಮತ್ತು ಮರದ ಪಾರಂಪರಿಕ ವಿನ್ಯಾಸದ ಶಿಲ್ಪ ಕಲೆಗಳು ಭಕ್ತರ ಕಣ್ಮನ ಸೆಳೆಯುತ್ತಿದೆ. ದೇವಸ್ಥಾನದ ಆಕರ್ಷಕ ಶಿಲ್ಪ ಕಲೆಗಳನ್ನು ಕಣ್ತುಂಬಿಕೊಳ್ಳಲೆಂದೇ ದೂರದ ಊರುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಸುತ್ತಮುತ್ತಲಿನ ಗ್ರಾಮದ ಭಕ್ತರಿಗೆ ಅನುಕೂಲವಾಗಲೆಂದೇ ನಿತ್ಯ ಅಲೆವೂರು, ಹಿರಿಯಡಕ, ಉಡುಪಿ, ಓಂತಿಬೆಟ್ಟು, ಆತ್ರಾಡಿಯಿಂದ ಉಚಿತ ಬಸ್ ಸೇವೆ ನಡೆಯುತ್ತಿದೆ.