ವೇತನಕ್ಕೆ ಬಿಸಿಯೂಟ ತಯಾರಕರ ಆಗ್ರಹ : ಕನಿಷ್ಠ ವೇತನ-ಅಪಘಾತ ವಿಮೆ-ಮರಣ ಪರಿಹಾರ ನೀಡಲಿ
Team Udayavani, Aug 13, 2020, 2:20 PM IST
ಹರಪನಹಳ್ಳಿ: ಬಿಸಿಯೂಟ ತಯಾರಕರಿಗೆ ನಾಲ್ಕು ತಿಂಗಳ ವೇತನ ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು. ರಾಜ್ಯದ ಸರ್ಕಾರಿ ಹಿರಿಯ ಪ್ರಾಥಮಿಕ, ಪ್ರೌಢ ಶಾಲೆ, ಅನುದಾನಿತ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಅಕ್ಷರ ದಾಸೋಹ ಮಧ್ಯಾಹ್ನ ಉಪಾಹಾರ ಯೋಜನೆಯಡಿ ಬಿಸಿಯೂಟ ತಯಾರಕರು ಕಳೆದ ಹದಿನೇಳು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಗೌರವ ಸಂಭಾವನೆ ಆಧಾರದಲ್ಲಿ ದುಡಿಯುತ್ತಿದ್ದಾರೆ. ಆದರೆ ಬಿಸಿಯೂಟ ತಯಾರಕರು ಇಂದಿನ ಅಗತ್ಯ
ವಸ್ತುಗಳ ಬೆಲೆ ಏರಿಕೆ ಸಂದರ್ಭದಲ್ಲಿ ಜೀವನ ಮಾಡುವುದು ಕಷ್ಟವಾಗಿದೆ. ನಿರಂತರವಾಗಿ ಚಳವಳಿ ಮಾಡುತ್ತಾ ಬಂದರೂ ಸಂಭಾವನೆ ಹೆಚ್ಚಿಸದೇ ಮತ್ತು ಸೌಲಭ್ಯಗಳನ್ನು ಕೊಡದೇ ಸರ್ಕಾರ ನಿರ್ಲಕ್ಷéವಹಿಸಿದೆ ಎಂದು ಕಿಡಿಕಾರಿದರು.
ಬಿಸಿಯೂಟ ತಯಾರಕರಿಗೆ ಕಳೆದ ನಾಲ್ಕು ತಿಂಗಳಿನಿಂದಲೂ ಯಾವುದೇ ಲಾಕ್ಡೌನ್ ಪರಿಹಾರ ಇಲ್ಲದೆ ವೇತನವೂ ಇಲ್ಲದೇ ಜೀವನ ನಡೆಸುವುದು ತುಂಬಾ ಕಷ್ಟವಾಗಿದೆ. ಕೂಡಲೇ ವೇತನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ಎಐಟಿಯುಸಿ ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್, ಸಂಘಟನೆ ಅಧ್ಯಕ್ಷೆ ಪುಷ್ಪಾ, ಕಾರ್ಯದರ್ಶಿ ವಿಶಾಲಮ್ಮ, ಸಂಘಟನೆಯ ರೇಣುಕಮ್ಮ, ಬಸಮ್ಮ, ನಿರ್ಮಲ, ಹನುಮಕ್ಕ, ವಿಶಾಲಮ್ಮ, ಎ.ಕೆ ಮಂಜಮ್ಮ, ದ್ಯಾಮಮ್ಮ, ಫಾತೀಮಾ, ಸಾವಿತ್ರಮ್ಮ, ಗೀತಮ್ಮ, ಹಾಲಮ್ಮ, ರತ್ನಮ್ಮ ಹನುಮಜ್ಜಿ ಮತ್ತಿತರರು ಭಾಗವಹಿಸಿದ್ದರು.