Ranji Trophy: ತ್ರಿಪುರ ವಿರುದ್ಧ ಚೇತರಿಕೆ ಕಂಡ ಕರ್ನಾಟಕ
Team Udayavani, Jan 26, 2024, 11:09 PM IST
ಅಗರ್ತಲಾ: ಸಾಮಾನ್ಯ ತಂಡವಾದ ತ್ರಿಪುರ ವಿರುದ್ಧ ಶುಕ್ರವಾರ ಆರಂಭಗೊಂಡ ರಣಜಿ ಪಂದ್ಯದಲ್ಲಿ ಆರಂಭಿಕ ಕುಸಿತಕ್ಕೆ ಸಿಲುಕಿದ ಕರ್ನಾಟಕ, ಅನಂತರ ಚೇತರಿಸಿಕೊಂಡು 8 ವಿಕೆಟಿಗೆ 241 ರನ್ ಗಳಿಸಿದೆ.
16 ರನ್ ಆಗುವಷ್ಟರಲ್ಲಿ ಆರ್. ಸಮರ್ಥ್ (1), ಅನೀಶ್ ಕೆ.ವಿ. ಮತ್ತು ನಿಕಿನ್ ಜೋಸ್ (4) ಅವರನ್ನು ಕಳೆದುಕೊಂಡಿತು. ಆದರೆ ನಾಯಕ ಮಾಯಾಂಕ್ ಅಗರ್ವಾಲ್ (51), ಕಿಶನ್ ಬೆಡಾರೆ (62) ಮತ್ತು ವಾಸುಕಿ ಕೌಶಿಕ್ (ಬ್ಯಾಟಿಂಗ್ 50) ಅರ್ಧ ಶತಕದ ಮೂಲಕ ತಂಡವನ್ನು ಆಧರಿಸಿ ನಿಂತರು.
ಅಗರ್ವಾಲ್ ಭರ್ತಿ 100 ಎಸೆತಗಳಿಂದ ಕಪ್ತಾನನ ಇನ್ನಿಂಗ್ಸ್ ಕಟ್ಟಿದರು. ಇದರಲ್ಲಿ 10 ಬೌಂಡರಿ ಸೇರಿತ್ತು. ಕಿಶನ್ 121 ಎಸೆತ ಎದುರಿಸಿ ನಿಂತರು. ಸಿಡಿಸಿದ್ದು 9 ಬೌಂಡರಿ. ಬೌಲರ್ ವಾಸುಕಿ ಕೌಶಿಕ್ ಕೆಳ ಸರದಿಯಲ್ಲಿ ತಂಡದ ನೆರವಿಗೆ ನಿಂತರು. 61 ಎಸೆತ ಎದುರಿಸಿರುವ ಅವರು 7 ಬೌಂಡರಿ ಹೊಡೆದಿದ್ದಾರೆ.
ಕೀಪರ್ ಎಸ್. ಶರತ್ 25, ಶಶಿಕುಮಾರ್ ಕೆ. 19 ರನ್ ಮಾಡಿದರು. ರಾಣಾ ದತ್ತಾ (32ಕ್ಕೆ 3), ಮಣಿಶಂಕರ್ ಮುರಾಸಿಂಗ್ (35ಕ್ಕೆ 2) ಮತ್ತು ಅಭಿಜಿತ್ ಕೆ. ಸರ್ಕಾರ್ (55ಕ್ಕೆ 2) ತ್ರಿಪುರದ ಯಶಸ್ವಿ ಬೌಲರ್ಗಳು.