ನೇಮಕಾತಿಯಲ್ಲಿ ಕೊರಗ ಸಮುದಾಯಕ್ಕೆ ಪ್ರಾಶಸ್ತ್ಯ: ಕಂದಾಯ ಸಚಿವ ಆರ್. ಅಶೋಕ್ ಸೂಚನೆ
Team Udayavani, Feb 21, 2022, 6:25 AM IST
ಕರಾವಳಿಯ ಸಾಂಪ್ರದಾಯಿಕ ಮುಟ್ಟಾಳೆ ಧರಿಸಿದ ಸಚಿವರು, ಶಾಸಕರು, ಡಿ.ಸಿ., ಜಿ.ಪಂ. ಸಿಇಒ ಕೊರಗ ಸಮುದಾಯದವರ ಮನೆಯಲ್ಲಿ ಬೆಳಗ್ಗಿನ ಉಪಾಹಾರ ಸೇವಿಸಿದರು.
ಬ್ರಹ್ಮಾವರ/ಉಡುಪಿ: ಕೊರಗ ಸಮುದಾಯ ಮುಖ್ಯವಾಹಿನಿಗೆ ಬರಲು ಸರಕಾರ ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತಿದ್ದು, ಜಿಲ್ಲಾಡಳಿತ ಹೊರಗುತ್ತಿಗೆ ನೇಮ ಕಾತಿಯಲ್ಲಿ ಕೊರಗ ಸಮುದಾಯಕ್ಕೆ ಮೊದಲ ಪ್ರಾಶಸ್ತ್ಯ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ಶನಿವಾರದ ಗ್ರಾಮ ವಾಸ್ತವ್ಯ ಕಾರ್ಯ ಕ್ರಮದ ಮರುದಿನ ರವಿವಾರ ಬೆಳಗ್ಗೆ ಸಚಿವ ಆಶೋಕ್ ಅವರು ಶಾಸಕ ಕೆ. ರಘುಪತಿ ಭಟ್ ಅವರೊಂದಿಗೆ ಕೆಂಜೂರಿನ ಕೊರಗ ಸಮುದಾಯ ಕುಮಾರ್ ಅವರ ಮನೆಗೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದರು.
ಯಾವುದೇ ಇಲಾಖೆಗಳ ಹೊರಗುತ್ತಿಗೆ ನೇಮಕಾತಿ ಇದ್ದಲ್ಲಿ ಮೊದಲು ಕೊರಗ ಸಮುದಾಯದವರಿಗೆ ಆದ್ಯತೆ ನೀಡುವಂತೆ ನಿರ್ದೇಶನ ನೀಡಿದ್ದೇನೆ ಎಂದರು.
ಕೊರಗ ಸಮುದಾಯದ ಜನರು ಸಣ್ಣ ಪ್ರಮಾಣದ ಕೃಷಿ ಕಾರ್ಯ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಕೃಷಿ ಇಲಾಖೆಯಿಂದ ಅನುಕೂಲವಾಗುವಂತೆ ಯಂತ್ರೋಪಕರಣಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಡೀಮ್ಡ್ ಫಾರೆಸ್ಟ್ ಇತರ ಕಾನೂನು ತೊಡಕುಗಳಿರುವ ಕೊರಗರ ಜಮೀನು ಸಮಸ್ಯೆಗೆ ಒಂದು ತಿಂಗಳ ಒಳಗೆ ಪರಿಹಾರ ಕಂಡುಕೊಂಡು ನ್ಯಾಯ ಒದಗಿಸಲಾಗುವುದು. ಕೊರಗ ಸಮುದಾಯಕ್ಕೆ ಜಾಗದ ಖಾತೆ ಮಾಡಲು ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಸರ್ವೇಯರ್ ನೇಮಿಸುವಂತೆ ಡಿಸಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಕೊರಗ ಸಮುದಾಯದ
ಮನೆಯಲ್ಲಿ ಉಪಾಹಾರ
ಕೊರಗ ಸಮುದಾಯದ ಕುಮಾರ್ ಅವರ ನಿವಾಸದಲ್ಲಿ ಉಪಾಹಾರವಾಗಿ ಮೂಡೆಯನ್ನು ಸಚಿವರು ಸೇವಿಸಿದರು. ಶಾಸಕ ಕೆ. ರಘುಪತಿ ಭಟ್, ಡಿಸಿ ಕೂರ್ಮಾ ರಾವ್, ಜಿ.ಪಂ. ಸಿಇಒ ಡಾ| ನವೀನ್ ಭಟ್, ಎಸಿ ರಾಜು ಕೂಡ ಉಪಾಹಾರ ಸವಿದರು. ಬಳಿಕ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿ ಅಹವಾಲು ಸ್ವೀಕರಿಸಿದರು. ಕಳೂ¤ರು ಗ್ರಾ.ಪಂ. ಅಧ್ಯಕ್ಷೆ ಸುಕನ್ಯಾ ಶೆಟ್ಟಿ, ಗ್ರಾ.ಪಂ ಸರ್ವ ಸದಸ್ಯರು, ಕೊರಗ ಸಮುದಾಯದ ಮುಖಂಡರು ಜತೆಗಿದ್ದರು.
ಸ್ಥಳದಲ್ಲೇ ನೇಮಕಾತಿ ಆದೇಶ
ಕೊರಗ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಸ್ಥಳದಲ್ಲೇ ಸಮುದಾಯದ ಕೆಂಜೂರು ಗ್ರಾಮದ ಸುರೇಂದ್ರ ಅವರಿಗೆ ಗ್ರಾಮ ಸಹಾಯಕ ಹುದ್ದೆಗೆ ನೇರ ನೇಮಕಾತಿ ಮಾಡಿಕೊಳ್ಳ ಲಾಗಿದೆ ಎಂದು ಅಶೋಕ್ ತಿಳಿಸಿದರು.
ಸುರೇಂದ್ರ ಅವರು ಎಂಎಸ್ಡಬ್ಲ್ಯೂ ಪದವೀಧರನಾಗಿದ್ದು, ಕರಾವಳಿಯಲ್ಲಿ ಗ್ರಾಮ ಸಹಾಯಕ ಹುದ್ದೆಗೆ ನೇಮಕ ಗೊಂಡ ಸಮುದಾಯದ ಪ್ರಥಮ ವ್ಯಕ್ತಿ ಯಾಗಿದ್ದಾರೆ.
ಉಡುಪಿ ಗ್ರಾಮ ವಾಸ್ತವ್ಯ ವಿಶಿಷ್ಟ ಅನುಭವ ನೀಡಿದೆ. ಪ್ರತಿಯೊಂದು ಗ್ರಾಮ ವಾಸ್ತವ್ಯ ಹೊಸ ಬದಲಾವಣೆಗೆ ನಾಂದಿ ಹಾಡಲಿದೆ. ಜನರ ಕಂದಾಯ ಸಂಬಂಧಿತ ಸಮಸ್ಯೆಗಳಿಗೆ ಸ್ಪಂದಿಸಲು ಜಿಲ್ಲಾಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತೇನೆ. ನನ್ನ ಗ್ರಾಮ ವಾಸ್ತವ್ಯ ಕಾರ್ಯಕ್ರಮ “ಬಂದ ಸಿದ್ದ, ಹೋದ ಸಿದ್ದ’ ರೀತಿಯಲ್ಲ. ಇದರ ಪರಿಣಾಮಗಳನ್ನು ಮರು ಪರಿಶೀಲನೆ ಮಾಡಲು ವ್ಯವಸ್ಥೆ ಯೊಂದನ್ನು ರೂಪಿಸಿದ್ದೇನೆ.
– ಆರ್. ಅಶೋಕ್, ಕಂದಾಯ ಸಚಿವ