ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನ ಮತ್ತೆ ಬಂದ್ ಆಗುತ್ತಾ ? ಭಕ್ತರು, ವ್ಯಾಪಾರಸ್ಥರಲ್ಲಿ ಆತಂಕ
Team Udayavani, Feb 7, 2022, 8:49 PM IST
ಸವದತ್ತಿ : ಕೋವಿಡ್-19 ಮತ್ತು ಓಮಿಕ್ರಾನ್ ಸೊಂಕಿನ ಹಾವಳಿ ಕಮ್ಮಿ ಆದ ಬೆನ್ನಲ್ಲೆ ತಾಲೂಕಿನ ಸುಕ್ಷೇತ್ರ ಯಲ್ಲಮ್ಮ ದೇವಸ್ಥಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಷರತ್ತು ಬದ್ದ ಅನುಮತಿ ನೀಡಲಾಗಿದೆ. ಇದರಿಂದ ಬಹುಕಾಲ ಯಲ್ಲಮ್ಮ ದೇವಿಯ ದರ್ಶನ ಸಿಗದಂತ ಭಕ್ತರು ಇದೀಗ ದೇವಸ್ಥಾನದತ್ತ ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದಾರೆ.
ಕಳೆದ ಬನದ ಹುಣ್ಣಿಮೆಯಂದು ದರ್ಶನಾವಕಾಶ ಇರದ ಕಾರಣ ಸುತ್ತಲಿನ ಗ್ರಾಮಗಳಲ್ಲಿ ವಾಸ್ತವ್ಯ ಹೂಡಿ ದೇವಿಗೆ ಪೂಜೆ ಸೇರಿದಂತೆ ಇತರೆ ಧಾರ್ಮಿಕ ಕಾರ್ಯಗಳು ನಡೆದವು. ಇದೀಗ ಯಲ್ಲಮ್ಮ ದೇವಸ್ಥಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇದ್ದು, ಫೆ.16 ರಂದು ಬಹುದೊಡ್ಡ ಜಾತ್ರೆಯಾದ ಭಾರತ ಹುಣ್ಣಿಮೆ ಜಾತ್ರೆ ಜರುಗಲಿದೆ. ಈ ಜಾತ್ರೆಗೆ ಪ್ರತಿವರ್ಷ 10 ಲಕ್ಷಕ್ಕೂ ಅಧಿಕ ಜನ ಸೇರುತ್ತಿದ್ದರು. ಆದರೆ ಕೋವಿಡ್ ಕಾರಣ ಕಳೆದ 2 ವರ್ಷಗಳಿಂದ ಬನದ ಹಾಗೂ ಭಾರತ ಹುಣ್ಣಿಮೆ ಜಾತ್ರೆಗಳು ಭಕ್ತರಿಲ್ಲದೇ ನಡೆದಿದ್ದು, ಈ ವರ್ಷವಾದರೂ ಭಕ್ತಗಣದೊಂದಿಗೆ ಜಾತ್ರೆ ನಡೆಯಬಹುದೆಂಬ ಆಶಾಭಾವದೊಂದಿಗೆ ತಂಡೋಪ ತಂಡವಾಗಿ ದೇವಸ್ಥಾನದತ್ತ ಆಗಮನ ದಿನನಿತ್ಯ ನಡೆದಿದೆ.
ಕೋವಿಡ್ ಮಾರ್ಗಸೂಚಿ ಗಾಳಿಗೆ : ಜಿಲ್ಲಾಧಿಕಾರಿ ಕಚೇರಿಯಿಂದ ದೇವಸ್ಥಾನ ಪ್ರಾರಂಭಿಸುವದಕ್ಕೆ ಷರತ್ತು ಬದ್ಧ ಅನುಮತಿ ನೀಡಲಾಗಿದ್ದು, ಸರಕಾರ ಜಾರಿಗೊಳಿಸಿದ ಯಾವ ನಿಯಮವೂ ಪಾಲನೆಯಾಗುತ್ತಿಲ್ಲ.
ಮತ್ತೆ ಬಂದ್ ಆಗುವ ಊಹಾಪೋಹ : ಕೋವಿಡ್ ವೈರಾಣುವಿನ ಹಾವಳಿ ಪ್ರಾರಂಭವಾದಾಗಿನಿಂದ ಭಕ್ತರು ಹಾಗೂ ವ್ಯಾಪಾರಸ್ಥರಿಗೆ ತಲೆನೋವುಂಟು ಆದಂತ್ತಿದೆ. ಕಳೆದ ಎರಡುವರೆ ವರ್ಷದಿಂದ ಈ ರೀತಿಯ ಹಾವು ಏಣಿ ಆಟ ಪ್ರಾರಂಭವಾಗಿದ್ದು, ಅಲ್ಲಿನ ವ್ಯಾಪಾರಿಗಳು ವ್ಯಾಪಾರವಿಲ್ಲದೇ ಕುಟುಂಬ ನಿರ್ವಹಿಸುವುದು ಕಷ್ಟವಾಗಿದೆ. ದೇವಸ್ಥಾನದ ಸುತ್ತಲಿನ ಬಹುತೇಕ ಜನರು ದೇವಸ್ಥಾನವನ್ನೆ ನೆಚ್ಚಿಕೊಂಡಿದ್ದು, ವೈರಾಣುವಿನ ಕಾಟದಿಂದ ಯಾವುದೂ ಸಾಧ್ಯವಾಗದೇ ತಲೆ ಮೇಲೆ ಕೈಹೊತ್ತು ಕುರುವಂತಾಗಿದೆ.
ಇದೀಗ ದೇವಸ್ಥಾನ ಇದೇ ತಿಂಗಳ 10 ರಿಂದ ಮತ್ತೆ ಬಂದ್ ಆಗುವ ಊಹಾಪೋಹಗಳು ಹರಿದಾಡುತ್ತಿದ್ದು, ಮುಂದೆ ಬರುವ ಭಾರತ ಹುಣ್ಣಿಮೆ ಜಾತ್ರೆಗೆ ಪೂರ್ವ ತಯಾರಿ ನಡೆಸಿರುವ ವ್ಯಾಪಾರಸ್ಥರು, ಭಕ್ತರು ಮುಂದೆ ಏನೆಂಬುದರ ಚಿಂತೆಯಲ್ಲಿದ್ದಾರೆ. ಇನ್ನು ಕೆಲವರು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಸಾಲದ ಸುಳಿಗೆ ಸಿಲುಕುವ ಬದಲು ಕೂಲಿ ಕೆಲಸಕ್ಕಾದರೂ ಹೋದರಾಯಿತು ಎಂಬ ಮನಸ್ಥಿತಿಯಲ್ಲಿದ್ದಾರೆ.
ನೆರೆಯ ಮಹಾರಾಷ್ಟ್ರ, ಆಂದ್ರ, ತೆಲಂಗಾಣ ಮತ್ತು ಗೋವಾಗಳಿಂದ ಈ ಜಾತ್ರೆಗೆಂದು ಹೆಚ್ಚೆಚ್ಚು ಭಕ್ತರು ಬರುತ್ತಾರೆ. ಈ ಕಾರಣದಿಂದ ಸೋಂಕಿನ ತೀವ್ರತೆ ಹೆಚ್ಚುತ್ತಿದ್ದಂತೆ ಜಿಲ್ಲಾಧಿಕಾರಿಗಳು ಜಿಲ್ಲೆಯ 10 ದೇವಸ್ಥಾನಗಳಿಗೆ ನಿರ್ಭಂಧ ವಿಧಿಸಿದ್ದರು. ಇದೀಗ ದೇಶಾದ್ಯಂತ ಸೊಂಕಿನ ತೀವ್ರತೆ ಕಡಿಮೆ ಇದ್ದು, ಆದರೂ ಈ ಊಹಾಪೋಹಗಳು ಹರಿದಾಡುತ್ತಿದೆ. ಇದರಿಂದ ವ್ಯಾಪಾರಸ್ಥರಿಗೆ ದಿಕ್ಕೂ ತೋಚದಂತಾಗಿದೆ. ಕಾರಣ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಈ ಊಹಾಪೋಹಗಳಿಗೆ ತೆರೆ ಎಳೆಯಬೇಕಾಗಿದೆ.
ಕುಡಿಯುವ ನೀರಿನ ಪರದಾಟ: ಗುಡ್ಡದಲ್ಲಿ ಬರುವ ಭಕ್ತರಿಗೆ ಕುಡಿಯುವ ನೀರಿನ ಕೊರತೆ ಇದ್ದು, ಇದೀಗ ಈ ಕೊರತೆ ನಿಗಿಸಲು ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಕ್ರಮ ಜರುಗಿಸಿದ್ದಾರೆ. ಆದರೂ ಸಹ ಭಕ್ತರು ಸಮೀಪದ ಉಗರಗೋಳಕ್ಕೆ ಬಂದು ನೀರು ತುಂಬಿಸಿಕೊಂಡು ಹೋಗುವ ದೃಶ್ಯಗಳು ಸಾಮಾನ್ಯವಾಗಿವೆ.