ವೇಗಿ ಶಾರ್ದೂಲ್ ಠಾಕೂರ್ ವಿರುದ್ಧ ತನಿಖೆ ತೂಗುಗತ್ತಿ?
Team Udayavani, Jun 1, 2020, 5:56 AM IST
ಮುಂಬಯಿ: ಲಾಕ್ಡೌನ್ ಸಡಿಲಿಕೆಯಾದ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅನುಮತಿ ಪಡೆಯದೆ ಹೊರಾಂಗಣ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿರುವ ಭಾರತ ಕ್ರಿಕೆಟ್ ತಂಡದ ವೇಗಿ ಶಾರ್ದೂಲ್ ಠಾಕೂರ್ ವಿರುದ್ಧ ತನಿಖೆ ಎದುರಾಗುವ ಸಾಧ್ಯತೆ ಇದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಶಾರ್ದೂಲ್ ಠಾಕೂರ್ ಸೇರಿದಂತೆ ಒಟ್ಟು ಮೂವರು ಕ್ರಿಕೆಟಿಗರ ವಿರುದ್ಧ ಶಿಸ್ತುಕ್ರಮ ಜರಗಿಸುವ ಸಾಧ್ಯತೆ ಇದೆ, ಮುಂಬೈ ಕ್ರಿಕೆಟ್ ಸಂಸ್ಥೆ ಶಾರ್ದೂಲ್ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆಸಿದ ಅಭ್ಯಾಸವನ್ನು ಪ್ರಶ್ನಿಸಿದ ಬೆನ್ನಲ್ಲೆ ಇಂತಹ ವರದಿ ಹೊರಬಿದ್ದಿದೆ. ಮಹಾರಾಷ್ಟ್ರ ಜಿಲ್ಲೆಯಲ್ಲಿ ಇತ್ತೀಚೆಗೆ ಜಿಲ್ಲಾಡಳಿತ ಕೋವಿಡ್-19 ಲಾಕ್ಡೌನ್ ಸಡಿಲಗೊಳಿಸಿತ್ತು. ತಕ್ಷಣ ಶಾರ್ದೂಲ್ ಠಾಕೂರ್ ಬೌಲಿಂಗ್ ಅಭ್ಯಾಸ ನಡೆಸಿದ್ದರು. ಇನ್ನೂ ಬಿಸಿಸಿಐ ಕ್ರಿಕೆಟಿಗರಿಗೆ ಹೊರಾಂಗಣ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಲು ಅನುಮತಿ ನೀಡಿಲ್ಲ. ಇಂತಹ ಸಮಯದಲ್ಲಿ ಶಾರ್ದೂಲ್ ಠಾಕೂರ್ ಶಿಸ್ತು ಉಲ್ಲಂಘಿಸಿದ್ದಾರೆ ಎನ್ನುವ ಟೀಕೆಗಳು ವ್ಯಕ್ತವಾಗಿದ್ದವು.
ಶಾರ್ದೂಲ್ ಠಾಕೂರ್ ಭಾರತ ತಂಡದ ಕೇಂದ್ರೀಯ ಗುತ್ತಿಗೆ ಹೊಂದಿರುವ ಆಟಗಾರ, ಸದ್ಯ 1 ಕೋಟಿ ರೂ. ವೇತನ ಪಡೆಯುತ್ತಿದ್ದಾರೆ. ಶಾರ್ದೂಲ್ ಭಾರತದ ಪರ 1 ಟೆಸ್ಟ್, 11 ಏಕದಿನ ಹಾಗೂ 15 ಟಿ20 ಪಂದ್ಯಗಳನ್ನಾಡಿದ್ದಾರೆ.