Shira: ಕಾರು ಕೆರೆಗೆ ಬಿದ್ದು ಒಂದೇ ಕುಟುಂಬದ ಮೂವರು ಸಾವು
Team Udayavani, Oct 29, 2023, 10:44 PM IST
ಶಿರಾ(ತುಮಕೂರು ಜಿಲ್ಲೆ): ಧರ್ಮಸ್ಥಳ ಕ್ಷೇತ್ರಕ್ಕೆ ತೆರಳುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ಕೆರೆಗೆ ಉರುಳಿಬಿದ್ದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ರಾಮಲಿಂಗಾ ಪುರ ಗ್ರಾಮದಲ್ಲಿ ನಡೆದಿದೆ. ಶಿರಾ ತಾಲೂಕಿನ ವೀರಾಪುರ ಗ್ರಾಮದ ದೊಡ್ಡಣ್ಣ (75), ಸಣ್ಣಮ್ಮ (70) ಮತ್ತು ಯಮುನಾ (30) ಮೃತಪಟ್ಟವರು. ಯುಮುನಾ ಅವರ ಪತಿ ಪ್ರವೀಣ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರವಿವಾರ ಮುಂಜಾನೆ ಕಾರಿನಲ್ಲಿ ಇವರೆಲ್ಲರೂ ಧರ್ಮಸ್ಥಳಕ್ಕೆ ತೆರಳುತ್ತಿದ್ದರು. ಮಾರ್ಗ ಮಧ್ಯೆ ಸಾಕ್ಷಿಹಳ್ಳಿ ಮಣ್ಣಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ತೆರಳುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ಕೆರೆಗೆ ಉರುಳಿಬಿತ್ತು ಎನ್ನಲಾಗಿದೆ. ಕಾರನ್ನು ಯುಮುನಾ ಚಲಾಯಿಸುತ್ತಿದ್ದರು. ಸ್ಥಳಕ್ಕೆ ಶಿರಾ ನಗರ ಪೋಲಿಸರು ಭೇಟಿ ನೀಡಿ ಮೃತದೇಹಗಳನ್ನು ಹೊರತೆಗೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.