ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಕೇಸು: 30 ಬಾರಿ ಗುಂಡಿಟ್ಟರು,ಸತ್ತನೆಂದು ಪರಿಶೀಲಿಸಿದರು
ಉತ್ತರಾಖಂಡದಿಂದ ಒಬ್ಬ ವಶಕ್ಕೆ; ಒಟ್ಟು 6 ಮಂದಿ ಪೊಲೀಸ್ ಬಲೆಗೆ
Team Udayavani, May 30, 2022, 11:06 PM IST
ಚಂಡೀಗಢ: ಪಂಜಾಬ್ನ ಗಾಯಕ, ಕಾಂಗ್ರೆಸ್ ಮುಖಂಡ ಸಿಧು ಮೂಸೆವಾಲಾ ಹತ್ಯೆ ಮಾಡಿರುವ ದುಷ್ಕರ್ಮಿಗಳು ಬರೋಬ್ಬರಿ 30 ಬಾರಿ ಗುಂಡು ಹಾರಿಸಿದ್ದರು. ಅದಾದ ನಂತರ ಸಿಧು ಅಸುನೀಗಿದ್ದಾರೆಯೇ ಎನ್ನುವುದನ್ನು ಪರಿಶೀಲನೆ ಕೂಡ ಮಾಡಿದ್ದರು ಮೂಲಗಳು ತಿಳಿಸಿವೆ.
ಭಾನುವಾರಸಿಧು ತಮ್ಮ ಸೋದರ ಸಂಬಂಧಿ ಗುಪೀìತ್ ಸಿಂಗ್ ಮತ್ತು ಸ್ನೇಹಿತ ಗುರ್ವಿಂದರ್ ಸಿಂಗ್ ಜತೆ ಥಾರ್ ಎಸ್ಯುವಿಯಲ್ಲಿ ತೆರಳುತ್ತಿದ್ದರು. ಜವಾಹರ್ಕೆ ಗ್ರಾಮದ ಬಳಿ 2 ಕಾರುಗಳು ಸಿಧು ಕಾರನ್ನು ಅಡ್ಡಗಟ್ಟಿವೆ. ನಂತರ ಗುಂಡಿನ ದಾಳಿ ನಡೆಸಿವೆ. ಎಎನ್ ರಷ್ಯನ್ ಅಸಾಲ್ಟ್ ರೈಫೆಲ್ಗಳನ್ನೂ ಬಳಸಿರುವುದು ಸ್ಥಳದಲ್ಲಿ ಸಿಕ್ಕ ಗುಂಡುಗಳಿಂದ ತಿಳಿದುಬಂದಿದೆ.
ಸಿಧು ಅವರ ಹತ್ಯೆಯನ್ನು ತಾನೇ ಮಾಡಿದ್ದಾಗಿ ಕೆನಡಾ ಮೂಲದ ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ ಈಗಾಗಲೇ ಹೇಳಿಕೊಂಡಿದ್ದಾನೆ. ಆತ ತಿಹಾರ್ ಜೈಲಿನಲ್ಲಿರು ಖೈದಿ ಲಾರೆನ್ಸ್ ಬಿಶೋನಿ ಜತೆ ಸಂಪರ್ಕದಲ್ಲಿರುವುದಾಗಿ ಶಂಕಿಸಲಾಗಿದ್ದು, ಅವರಿಬ್ಬರೂ ಸೇರಿಯೇ ಈ ಕೊಲೆ ಯೋಜನೆ ಹಾಕಿರಬಹುದು ಎನ್ನಲಾಗಿದೆ.
ಆರು ಮಂದಿ ವಶ:
ಸಿಧು ಹತ್ಯೆಗೆ ಸಂಬಂಧಪಟ್ಟಂತೆ ಈವರೆಗೆ ಆರು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಸೋಮವಾರ ಉತ್ತರಾಖಂಡ ಹೇಮಕುಂಡ್ ಸಾಹಿಬ್ ಯಾತ್ರಿಕರ ನಡುವೆ ಅವಿತಿದ್ದ ಒಬ್ಟಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸಿಎಂ ಭಗವಂತ್ ವಾಗ್ಧಾನ:
ಪ್ರಕರಣದ ಬಗ್ಗೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ನ ನ್ಯಾಯಮೂರ್ತಿಗಳಿಂದಲೇ ತನಿಖೆ ನಡೆಸಲು ವ್ಯವಸ್ಥೆ ಮಾಡುವುದಾಗಿಯೂ ವಾಗ್ಧಾನ ನೀಡಿದ್ದಾರೆ. ಇದೇ ವೇಳೆ, “ಸಿಧು ಹತ್ಯೆ ಮಾಡಿದವರ ವಿರುದ್ಧ ಪಂಜಾಬ್ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಒತ್ತಾಯಿಸಿದ್ದಾರೆ.