Dam: ತೆಲಂಗಾಣದಿಂದ ನೀರು ಬಿಟ್ಟ ಆಂಧ್ರ- ತೆಲಂಗಾಣದ ಪ್ರಬಲ ಆಕ್ಷೇಪ
ನಾಗಾರ್ಜುನ ಸಾಗರ ಡ್ಯಾಮ್ನಲ್ಲಿ ಹೈಡ್ರಾಮಾ
Team Udayavani, Dec 3, 2023, 12:04 AM IST
ಹೈದರಾಬಾದ್: ರವಿವಾರ ತೆಲಂಗಾಣ ರಾಜ್ಯ ಮಹತ್ವದ ಚುನಾವಣ ಫಲಿತಾಂಶಕ್ಕೆ ಸಿದ್ಧವಾಗಿದೆ. ಅದರ ನಡುವೆಯೇ ತೆಲಂಗಾಣ ಮತ್ತು ಆಂಧ್ರಪ್ರದೇಶಗಳ ನಡುವೆ ಗಲಾಟೆಯೊಂದು ಆರಂಭವಾಗಿ, ಕೇಂದ್ರ ಸರಕಾ ರದ ಮಧ್ಯಪ್ರವೇಶದಿಂದ ತಣ್ಣಗಾಗಿದೆ. ಗುರುವಾರ ತೆಲಂಗಾಣದಲ್ಲಿ ಮತದಾನ ನಡೆಯುತ್ತಿತ್ತು. ಅದಕ್ಕೂ ಕೆಲವು ಗಂಟೆಗಳ ಮುನ್ನವೇ ಅಂದರೆ ಬುಧವಾರ ತಡ ರಾತ್ರಿ 2 ಗಂಟೆಗೆ ಆಂಧ್ರಪ್ರದೇಶದ ಪೊಲೀಸರು ನಾಗಾರ್ಜುನಸಾಗರ ಆಣೆಕಟ್ಟಿನಿಂದ ನೀರು ಹರಿಯ ಬಿಟ್ಟಿದ್ದಾರೆ. ಅದಾದ ಮೇಲೆ “ಕುಡಿಯುವ ನೀರಿಗಾಗಿ ನಾವು ನಾಗಾರ್ಜುನ ಬಲಕಾಲುವೆಯಿಂದ ನೀರನ್ನು ಹೊರಗೆ ಬಿಟ್ಟಿದ್ದೇವೆ’ ಎಂದು ಆಂಧ್ರಪ್ರದೇಶ ನೀರಾವರಿ ಸಚಿವ ಅಂಬಾಟಿ ರಾಂಬಾಬು ಎಕ್ಸ್ನಲ್ಲಿ ತಿಳಿಸಿದ್ದರು. ಇದಕ್ಕೆ ತೆಲಂಗಾಣ ಸಾಕ್ಷಿಸಮೇತ ಬಲವಾದ ಆಕ್ಷೇಪ ತೆಗೆದಿದೆ.
ಎರಡೂ ರಾಜ್ಯಗಳ ನಡುವೆ ಬಿಗುವಿನ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್ ಭಲ್ಲಾ, ಎರಡೂ ರಾಜ್ಯಗಳ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ನೀರನ್ನು ಹರಿಯಬಿಡುವುದರಿಂದ ಹಿಂದೆ ಸರಿಯಬೇಕು, ನ.28ರ ಪರಿಸ್ಥಿತಿಗೆ ಮರಳಬೇಕೆಂದು ಸೂಚಿಸಿದರು. ಅದಕ್ಕೆ 2 ರಾಜ್ಯಗಳೂ ಒಪ್ಪಿವೆ.
ಆಗಿದ್ದೇನು?: ಗುರುವಾರ ಮುಂಜಾನೆಯೇ ಗಂಟೆಗೆ 500 ಕ್ಯೂಸೆಕ್ನಂತೆ ನಾಗಾರ್ಜುನ ಸಾಗರದಿಂದ ನೀರು ಬಿಡ ಲಾಗಿದೆ. ತೆಲಂಗಾಣದ ಎಲ್ಲ ಸರಕಾರಿ ಸಿಬಂದಿ ಚುನಾವಣೆ ಯಲ್ಲಿ ಮಗ್ನರಾಗಿದ್ದಾಗಲೇ ಅಂದಾಜು 700 ಆಂಧ್ರ ಪೊಲೀ ಸರು ಸ್ಥಳಕ್ಕೆ ಪ್ರವೇಶಿಸಿ, ನೀರನ್ನು ಬಿಟ್ಟಿದ್ದಾರೆ. ಇದನ್ನು ಸಮ ರ್ಥನೆ ಮಾಡಿಕೊಂಡಿರುವ ಆ ರಾಜ್ಯ, ನಮಗೆ ಶೇ.66ರಷ್ಟು ನೀರಿನ ಮೇಲೆ ಹಕ್ಕಿದೆ. ಅದನ್ನು ಮಾತ್ರ ಬಳಸಿಕೊಂಡಿದ್ದೇವೆ. ತೆಲಂಗಾಣದ ಒಂದು ಹನಿ ನೀರಿಗೂ ಕೈಹಾಕಿಲ್ಲ ಎಂದಿದ್ದಾರೆ. ಆದರೆ ತೆಲಂಗಾಣ ಈ ಬಗ್ಗೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದೆ.