ಮಣಿಪಾಲ: ಟಿ.ಮೋಹನದಾಸ್ ಪೈ ಚಿತಾಭಸ್ಮ ಭೂವಿಸರ್ಜನೆ
Team Udayavani, Aug 2, 2022, 4:47 PM IST
ಮಣಿಪಾಲ: ರವಿವಾರ ಅಗಲಿದ ಮಣಿಪಾಲ ಪೈ ಕುಟುಂಬದ ಹಿರಿಯ ಚೇತನ ಟಿ.ಮೋಹನದಾಸ್ ಪೈಯವರ ಚಿತಾಭಸ್ಮವನ್ನು ಮಂಗಳವಾರ ಆಧುನಿಕ ಮಣಿಪಾಲದ ಶಿಲ್ಪಿ ಡಾ|ಟಿಎಂಎ ಪೈ, ಶಾರದಾ ಪೈ, ಟಿ.ಎ.ಪೈಯವರ ಸಮಾಧಿ ಇರುವ ಮಾಧವ ವಿಹಾರದಲ್ಲಿ ವಿಸರ್ಜಿಸಲಾಯಿತು.
ಸೋಮವಾರ ಅಂತಿಮ ಸಂಸ್ಕಾರ ನಡೆದ ಬೀಡಿನಗುಡ್ಡೆ ರುದ್ರಭೂಮಿಯಿಂದ ಚಿತಾಭಸ್ಮವನ್ನು ಮೋಹನದಾಸ್ ಪೈಯವರ ತಮ್ಮ ಟಿ.ಅಶೋಕ್ ಪೈಯವರು ತಂದು ಭೂಮಿಯಲ್ಲಿ ವಿಸರ್ಜಿಸಿದರು. ಮೋಹನದಾಸ್ ಪೈಯವರ ಸಮೀಪದ ಬಂಧುಗಳಾದ ಟಿ.ನಾರಾಯಣ ಪೈ, ಟಿ.ಸತೀಶ್ ಯು. ಪೈ, ಹರೀಶ ಪೈ, ಡಾ| ಬಾಲಕೃಷ್ಣ ಪೈ, ಇಂದುಮತಿ ಪೈ, ಆಶಾ ಪೈ, ಕುಸುಮಾ ಪೈ, ವಿಜಯಲಕ್ಷ್ಮೀ ಪೈ, ಗಾಯತ್ರೀ ಪೈ ಮತ್ತು ಒಡನಾಡಿ ನರಸಿಂಹ ಭಟ್, ಸಹಾಯಕ ರಾಘವೇಂದ್ರ ಮೊದಲಾದವರು ಪಾಲ್ಗೊಂಡಿದ್ದರು.
ಈ ಹಿಂದೆ ಡಾ|ಟಿಎಂಎ ಪೈ, ಶಾರದಾ ಪೈ, ಟಿ.ಎ.ಪೈಯವರ ಅಂತಿಮ ಸಂಸ್ಕಾರವನ್ನು ಮಾಧವ ವಿಹಾರದಲ್ಲಿ ನಡೆಸಲಾಗಿತ್ತು. ಆದರೆ ಮಳೆ ಬರುವ ಸಂಭವವಿದ್ದ ಕಾರಣ ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ಮೋಹನದಾಸ್ ಪೈಯವರ ಅಂತಿಮ ಸಂಸ್ಕಾರವನ್ನು ನಡೆಸಲಾಯಿತು. ಅಲ್ಲಿನ ಭಸ್ಮವನ್ನು ತಂದು ಮಾಧವ ವಿಹಾರದಲ್ಲಿ ವಿಸರ್ಜಿಸಲಾಯಿತು. ಪ್ರತಿ ವರ್ಷ ಇವರ ಸ್ಮೃತಿದಿನದಂದು ಈ ಸ್ಥಳದಲ್ಲಿ ಪುಷ್ಪ ನಮನವನ್ನು ನಡೆಸಲಾಗುತ್ತದೆ.