Belthangady: ಜಮೀನಿಗೆ ಅಕ್ರಮ ಪ್ರವೇಶಿಸಿ ಕಟ್ಟಡ ಧ್ವಂಸ
Team Udayavani, Dec 22, 2023, 12:50 AM IST
ಬೆಳ್ತಂಗಡಿ: ಶಿಬಾಜೆ ಗ್ರಾಮದ ಆರಂಪಾದೆಯಲ್ಲಿ ಪರವಾನಿಗೆ ಪಡೆದು ನಡೆಸುತ್ತಿದ್ದ ದಿನಸಿ ಅಂಗಡಿಗೆ ಅಕ್ರಮ ಪ್ರವೇಶಗೈದು ಅಂಗಡಿಯನ್ನು ಸಂಪೂರ್ಣ ಧ್ವಂಸ ಮಾಡಿದ ಘಟನೆ ನಡೆದಿದೆ. ಶಿಬಾಜೆ ಗ್ರಾಮದ ನಿವಾಸಿ ಲತಾ (48) ಹಾಗೂ ಪತಿ ಕೆ.ಆರ್. ವಾಸು ಅವರು ಇಲ್ಲಿನ ಆರಂಪಾದೆಯಲ್ಲಿ ಸಿಮೆಂಟ್ ಶೀಟ್ ಛಾವಣಿಯ ಕಟ್ಟಡ ನಿರ್ಮಿಸಿ 25 ವರ್ಷಗಳಿಂದ ದಿನಸಿ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದರು.
ಈ ಜಾಗದ ತಕರಾರಿಗೆ ಸಂಬಂಧಿಸಿ ಡಿ. 14ರಂದು ಟಿ.ಕೆ. ಮ್ಯಾಥ್ಯೂ ಮತ್ತು ಪ್ರಮೋದ್ ಅವರು ಅಂಗಡಿ ಕಟ್ಟಡ ಇರುವ ಜಮೀನಿನ ಸುತ್ತ ಬೇಲಿ ನಿರ್ಮಿಸಿದ್ದರು. ಅದನ್ನು ಲತಾ ಮತ್ತು ಅವರ ಪತಿ ತೆರವುಗೊಳಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಆರೋಪಿತರಾದ ಟಿ.ಕೆ. ಮ್ಯಾಥ್ಯೂ, ಪ್ರಮೋದ್, ಸನೋಧ್ ಕುಮಾರ್, ಕುರಿಯಾಕೋಸ್, ಜಯರಾಜ, ಎನ್.ಎಂ. ಕುರಿಯಾಕೋಸ್, ರೋಬಿನ್ಸ್, ಸಂತೋಷ್ ಯು.ಜಿ. ಮತ್ತು ಇತರ 15 ಮಂದಿ ಅಂಗಡಿ ಕಟ್ಟಡ ಧ್ವಂಸ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಸುಮಾರು 50,000 ರೂ. ನಷ್ಟ ಉಂಟು ಮಾಡಿದ್ದಾರೆ ಎಂದು ಲತಾ ಅವರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಕಾರ್ಯಾಚರಣೆ ನಡೆಸಿದ ಬೆಳ್ತಂಗಡಿ ಪೊಲೀಸರು ನಾಲ್ಕನೇ ಆರೋಪಿ ಟ್ಯಾಪಿಂಗ್ ಕೆಲಸ ಮಾಡುವ ಶಿಬಾಜೆ ಗ್ರಾಮದ ಅರಂಪಾದೆ ನಿವಾಸಿ ಕುರಿಯಾಕೋಸ್ (48) ನನ್ನು ಬಂಧಿಸಿದ್ದಾರೆ.