ರಾಜ್ಯದಲ್ಲಿ ಒಂದೇ ದಿನ ಇಬ್ಬರು ಸಾವು
Team Udayavani, May 14, 2020, 8:24 AM IST
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ವೈರಸ್ ಸೋಂಕಿಗೆ ಕಲಬುರಗಿ ಹಾಗೂ ದಕ್ಷಿಣ ಕನ್ನಡದಲ್ಲಿ ತಲಾ ಒಬ್ಬರು ಸೋಂಕಿತರು ಬಲಿಯಾಗಿದ್ದು, ಈ ಮೂಲಕ ಸೋಂಕಿನಿಂದ ಜೀವ ಕಳೆದುಕೊಂಡವರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. ರಾಜ್ಯದ ವಿವಿಧೆಡೆ 39 ಕೋವಿಡ್ 19 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿಗೊಳಗಾದವರ ಸಂಖ್ಯೆ 964ಕ್ಕೆ ತಲುಪಿದೆ. ಕಲಬುರಗಿಯಲ್ಲಿ ಕಂಟೈನ್ಮೆಂಟ್ ಝೋನ್ ನಿವಾಸಿಯಾಗದ್ದ 60 ವರ್ಷದ ವೃದ್ಧ ಸೋಮವಾರ (ಮೇ11) ಆಸ್ಪತ್ರೆಗೆ ಕರೆತರುವ ಮೊದಲೇ ಮೃತಪಟ್ಟಿದ್ದರು.
ಸೋಂಕು ಲಕ್ಷಣವಿದ್ದ ಹಿನ್ನೆಲೆ ಗಂಟಲು ದ್ರವ ಪಡೆದು ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಬುಧವಾರ ವರದಿ ಪಾಸಿಟಿವ್ ಎಂದು ಬಂದಿದೆ. ಮತ್ತೂಂದು ಪ್ರಕರಣದಲ್ಲಿ ದಕ್ಷಿಣ ಕನ್ನಡದ 58 ವರ್ಷ ಮಹಿಳೆಗೆ ಏಪ್ರಿಲ್ 28 ರಂದು ಸೋಂಕು ದೃಢಪಟ್ಟಿತ್ತು. ಇವರು ಮೆದುಳಿನ ಸೋಂಕು ಹಾಗೂ ಕ್ಷಯರೋಗದಿಂದ ಬಳಲುತ್ತಿದ್ದರು. ಈ ಹಿನ್ನೆಲೆ ಜಿಲ್ಲೆಯ ಕೋವಿಡ್ 19 ಚಿಕಿತ್ಸಾ ಆಸ್ಪತ್ರೆಯಲ್ಲಿ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಬುಧವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಸಾವಿನ ಪ್ರಕರಣಗಳ ಮೂಲಕ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಕಲಬುರಗಿಯಲ್ಲಿ ಏಳಕ್ಕೆ ಹಾಗೂ ದಕ್ಷಿಣ ಕನ್ನಡದಲ್ಲಿ ನಾಲ್ಕಕ್ಕೆ ಏರಿಕೆಯಾಗಿದೆ. ಬುಧವಾರ ದೃಢಪಟ್ಟ ಸೋಂಕು ಪ್ರಕರಣಗಳ ಪೈಕಿ ಬೀದರ್ನ 12 ಮಂದಿ, ಕಲಬುರಗಿಯ ಎಂಟು ಮಂದಿ, ಬೆಂಗಳೂರಿನಲ್ಲಿ ಏಳು ಮಂದಿ, ಹಾಸನದ ನಾಲ್ಕು ಮಂದಿ, ವಿಜಯಪುರ, ದಾವಣಗೆರೆಯ, ಉತ್ತರ ಕನ್ನಡದಲ್ಲಿ ತಲಾ ಇಬ್ಬರು, ಬಳ್ಳಾರಿ, ದಕ್ಷಿಣ ಕನ್ನಡದ ಒಬ್ಬರು ಸೋಂಕಿತರಾಗಿದ್ದಾರೆ. ದಕ್ಷಿಣ ಕನ್ನಡದ ಮಹಿಳೆ ಹೊರತು ಪಡಿಸಿ ಬಾಕಿ ಎಲ್ಲಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಂಟೈನ್ಮೆಂಟ್ ಝೋನ್ನಲ್ಲಿ ಕೋವಿಡ್ 19 ಕಾರ್ಮೋಡ: ಬೀದರ್ನಲ್ಲಿ ಒಂದೇ ದಿನ 12 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಎಲ್ಲಾ ಸೋಂಕಿತರು ಜಿಲ್ಲೆಯ ಕಂಟೈನ್ಮೆಂಟ್ ಝೋನ್ನ ನಿವಾಸಿಗಳಾಗಿದ್ದಾರೆ. ಸ್ಥಳೀಯ ಮೂಲಗಳ ಪ್ರಕಾರ ರ್ಯಾಂಡಮ್ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಇದರಿಂದ ಆ ಪ್ರದೇಶದಲ್ಲಿ ಸಮುದಾಯಕ್ಕೆ ಸೋಂಕು ಹಬ್ಬಿರುವ ಆತಂಕ ಶುರುವಾಗಿದೆ. ಸೋಂಕಿತರ ಪೈಕಿ ಮೂರು ಮಂದಿ ಗಂಡು, ಒಂಭತ್ತು ಮಂದಿ ಮಹಿಳೆಯರಿದ್ದಾರೆ. ಇನ್ನು ಜಿಲ್ಲೆಯ ಸೋಂಕಿತರ ಸಂಖ್ಯೆ 41ಕ್ಕೆ ಏರಿಕೆಯಾಗಿದ್ದು, 26 ಸಕ್ರಿಯ ಪ್ರಕರಣಗಳಿವೆ.
ವಿವಿಧೆಡೆ ಸೋಂಕು: ಮುಂಬೈ ಪ್ರವಾಸದ ಹಿನ್ನೆಲೆಯಲ್ಲಿ ಹೊಂದಿದ್ದವರ ಪೈಕಿ ಹಾಸನದಲ್ಲಿ ನಾಲ್ವರಿಗೆ, ವಿಜಯಪುರ ಜಿಲ್ಲೆಯ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ದಾವಣಗೆರೆಯಲ್ಲಿ ಸೋಂಕಿತರ (ಪಿ-695) ಸಂಪರ್ಕದಲ್ಲಿದ್ದ 33 ವರ್ಷದ ಮಹಿಳೆ ಹಾಗೂ 11 ವರ್ಷದ ಬಾಲಕನಿಗೆ ಸೋಂಕು ಹರಡಿದೆ. ಉತ್ತರ ಕನ್ನಡದಲ್ಲಿ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆಯಿಂದ ಓರ್ವ ಪುರುಷ ಹಾಗೂ ಸೋಂಕಿತರ (ಪಿ-786) ಸಂಪರ್ಕದಿಂದ ಓರ್ವ ಮಹಿಳೆಗೆ ಸೋಂಕು ದೃಢಪಟ್ಟಿದೆ. ದಕ್ಷಿಣ ಕನ್ನಡದಲ್ಲಿ ಸೋಂಕಿತೆ (ಪಿ.507) ಓರ್ವ ಮಹಿಳೆಗೆ, ಬಳ್ಳಾರಿಯಲ್ಲಿ ಉಸಿರಾಟ ತೊಂದರೆಯಿಂದ ದಾಖಲಾದ ಮತ್ತೂಬ್ಬ ಮಹಿಳೆಗೆ ಸೋಂಕು ಹರಡಿದೆ. ಬೆಂಗಳೂರಿನ ಪಾದರಾಯನಪುರ ಸೋಂಕಿತರ ಪ್ರಾಥಮಿಕ ಸಂಪರ್ಕ ಹಿನ್ನೆಲೆ ಹೋಟೆಲ್ನಲ್ಲಿ ಕ್ವಾರಂಟೈನ್ ಮಾಡಿದ್ದ ಐದು ಮಂದಿಗೆ ಸೋಂಕು ತಗಲಿದೆ.
18 ಮಂದಿ ಬಿಡುಗಡೆ: ಸೋಂಕಿತರ ಪೈಕಿ ಬುಧವಾರ ಬೆಳಗಾವಿ, ಮಂಗಳೂರಿನಲ್ಲಿ ತಲಾ 5 ಮಂದಿ, ಬೆಂಗಳೂರಿನ 4 ಮಂದಿ, ದಕ್ಷಿಣ ಕನ್ನಡ, ಬಳ್ಳಾರಿ, ಬೀದರ್ ಮತ್ತು ವಿಜಯಪುರದಲ್ಲಿ ತಲಾ ಒಬ್ಬರು ಸೇರಿ ಒಟ್ಟು 18 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಇದರಿಂದ ಸೋಂಕಿನಿಂದ ಮುಕ್ತರಾದವರ ಒಟ್ಟು ಸಂಖ್ಯೆ 451ರಷ್ಟಾಗಿದೆ. ಉಳಿದ 474 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 10 ಜನರ ಆರೋಗ್ಯ ಗಂಭೀರವಾಗಿದ್ದುಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಲಬುರಗಿಯಲ್ಲಿ 8 ಮಂದಿಗೆ ಸೋಂಕು: ಕಲಬುರಗಿಯಲ್ಲಿ ಐದು ಮಂದಿ ಮಹಿಳೆಯರು ಹಾಗೂ ವೈದ್ಯ ಸೇರಿದಂತೆ ಎಂಟು ಮಂದಿಗೆ ಸೋಂಕು ತಗುಲಿದೆ. ಮುಂಬೈನಿಂದ ಬಂದ ಕಮಲಾಪುರ ತಾಲೂಕಿನ 30 ವರ್ಷದ ಸೋಂಕಿತ ವ್ಯಕ್ತಿ (ಪಿ-806)ಯ ಸಂಪರ್ಕದಿಂದಲೇ ನಾಲ್ವರು ಮಹಿಳೆಯರಿಗೆ ಸೋಂಕು ಹರಡಿದೆ. ಮತ್ತೂಂದು ಪ್ರಕರಣದಲ್ಲಿ ಆಂಧ್ರಪ್ರದೇಶದ ಗುಂಟೂರಿನಿಂದ ಬಂದ 19 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರ (ಪಿ-848) ಸಂಪರ್ಕದಿಂದ 30 ವರ್ಷದ ಮಹಿಳೆಗೆ, ಸೋಂಕಿತ (ಪಿ-848) ವ್ಯಕ್ತಿಯೊಬ್ಬರಿಗೆ ಮಾಹಿತಿ ಇಲ್ಲದೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದ ಖಾಸಗಿ ಆಸ್ಪತ್ರೆಯ 45 ವರ್ಷದ ವೈದ್ಯರೊಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಉಳಿದಂತೆ ಕಂಟೈನ್ಮೆಂಟ್ ಪ್ರದೇಶ ಸಂಪರ್ಕ ಹಿನ್ನೆಲೆಯ 60 ವರ್ಷದ ವೃದ್ಧನಿಗೆ ಸೋಂಕು ತಗುಲಿ ಮೃತಪಟ್ಟಿದ್ದಾರೆ.
ಚಿಕಿತ್ಸೆ ನೀಡುತ್ತಿದ್ದ ನರ್ಸ್ಗೂ ಸೋಂಕು: ಬೆಂಗಳೂರಿನಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್ 19 ಸೋಂಕಿತ ರಿಗೆ ಚಿಕಿತ್ಸೆ ನೀಡುತ್ತಿದ್ದ ಓರ್ವ ನರ್ಸ್ಗೆ ಸೋಂಕು ತಗುಲಿದೆ. 37 ವರ್ಷದ ನರ್ಸ್ ಕಳೆದ 15 ದಿನಗಳಿಂದ ಕೋವಿಡ್ 19 ವಾರ್ಡ್ನಲ್ಲಿ ಕೆಲಸ ಮಾಡಿ, ಬಳಿಕ ಕ್ವಾರಂಟೈನ್ ಆಗಿದ್ದರು. ನಿಯಮಾನುಸಾರ ಸೋಂಕು ಪರೀಕ್ಷಿಸಿದ ವೇಳೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಸದ್ಯ ಆ ನರ್ಸ್ ಜತೆಗಿದ್ದ ಸಿಬ್ಬಂದಿಯನ್ನೂ ಕ್ವಾರಂಟೈನ್ ಮಾಡಲಾಗಿದೆ. ನಗರದ ಮತ್ತೂಂದು ಪ್ರಕರಣದಲ್ಲಿ ಲಂಡನ್ನಿಂದ ಬಂದ ಯುವಕನಿಗೆ ಸೋಂಕು ತಗುಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drought Relief: ಕಾಂಗ್ರೆಸ್-ಬಿಜೆಪಿ ಬರ ಪರಿಹಾರ ಜಟಾಪಟಿ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ