ಮಾತಿನಿಂದಲೂ ಮೌನದಿಂದಲೂ ಬೇಸ್ತು ಬೀಳುವುದು
Team Udayavani, Dec 21, 2020, 5:50 AM IST
ಸಾಂದರ್ಭಿಕ ಚಿತ್ರ
ನಾವು – ನೀವು ಸಹಿತ ಎಲ್ಲರೂ ಒಂದೋ ಮಾತಿನಿಂದ ಮೂರ್ಖರಾಗುತ್ತೇವೆ, ಇಲ್ಲವೇ ಮೌನದಿಂದ. ಬೇಸ್ತು ಬೀಳದವರು, ಮೂರ್ಖರಾಗದವರು ಯಾರೂ ಇಲ್ಲ. ಥಳುಕಿನ ಮಾತುಗಳಿಂದ ಮೋಸಹೋಗು ತ್ತೇವೆ, ಮೊನಚಾದ ಮೌನದಿಂದಲೂ. ಎರಡರಿಂದಲೂ ಜನರು ವಂಚಿಸಲ್ಪಡುತ್ತಾರೆ. ಇಲ್ಲೊಂದು ಪ್ರಸಿದ್ಧ ಝೆನ್ ಕಥೆಯಿದೆ. ಈ ಕಥೆಯೂ ಜಪಾನಿನದ್ದೇ.
ಅಲ್ಲೊಬ್ಬ ಪ್ರಖ್ಯಾತ ಝೆನ್ ಗುರುವಿದ್ದ, ಮೌನಿ ಬಾಬಾ. ಮೌನದಲ್ಲಿ ದೇಶವ್ಯಾಪಿ ಯಾಗಿ ಅವನಿಗೆ ಹೆಸರಿತ್ತು. ಮೌನವೇ ಅವನ ಜ್ಞಾನೋದಯ, ಸಂಕೇತಗಳಿಂದಲೇ ಎಲ್ಲ ವನ್ನೂ ಹೇಳುತ್ತಿದ್ದ. ನಿಜಕ್ಕೂ ಅವನೊಬ್ಬ ಖೊಟ್ಟಿ ಝೆನ್. ಅವನಿಗೇನೂ ಗೊತ್ತಿರಲಿಲ್ಲ. ಇಬ್ಬರು ಅನುಯಾಯಿಗಳು ಅವನು ತೋರಿಸುವ ಸಂಕೇತಗಳನ್ನು ವ್ಯಾಖ್ಯಾನ ಮಾಡುತ್ತಿದ್ದರು. ಅವರ ಬಲ ದಿಂದಲೇ ಅವನು ಬದುಕಿದ್ದ. ಯಾರು ಏನೇ ಕೇಳಿದರೂ ಅನುಯಾಯಿಗಳೇ ಉತ್ತರಿ ಸುತ್ತಿದ್ದರು ಅಥವಾ ಗುರು ವಿನ ಸಂಕೇತಗಳನ್ನು ವ್ಯಾಖ್ಯಾ ನಿಸುತ್ತಿದ್ದರು. ಗುರು ಎಂದೂ ತುಟಿಪಿಟಿಕ್ ಎನ್ನುತ್ತಿರಲಿಲ್ಲ.
ಇಂತಿರಲಾಗಿ ಒಂದು ದಿನ ಇಬ್ಬರೂ ಶಿಷ್ಯರು ಪೇಟೆಗೆ ಹೋಗಿದ್ದರು. ಅದೇ ಹೊತ್ತಿಗೆ ಯಾತ್ರಿಯೊಬ್ಬ ಆಶ್ರಮಕ್ಕೆ ಬಂದ. ಮೌನಿ ಗುರುವಿನ ಬಳಿ ಕೆಲವು ಜಿಜ್ಞಾಸೆಗಳನ್ನು ಪರಿಹರಿಸಿಕೊಳ್ಳಬೇಕೆಂಬುದು ಅವನ ಅಭಿಲಾಶೆ. ಅವನು ಮೌನಿ ಬಾಬಾನ ಬಳಿ “ಬುದ್ಧ ಎಂದರೇನು’ ಎಂದು ಪ್ರಶ್ನಿಸಿದ.
ಮೌನಿ ಗುರುವಿಗೆ ಪೀಕಲಾಟಕ್ಕಿಟ್ಟು ಕೊಂಡಿತು. ಉತ್ತರಕ್ಕಾಗಿ ತಡಕಾಡಿ ಏನೂ ಹೊಳೆಯದೆ ಕೊನೆಗೆ ತನ್ನ ಅನುಯಾಯಿ ಗಳಿಗಾಗಿ ನಾಲ್ಕೂ ದಿಕ್ಕುಗಳೆಡೆ ನೋಡಿದ. ಯಾತ್ರಾರ್ಥಿಗೆ ಸಂತೃಪ್ತಿಯಾಯಿತು. ಆತ “ಧರ್ಮ ಎಂದರೇನು’ ಎಂದು ಇನ್ನೊಂದು ಪ್ರಶ್ನೆ ಕೇಳಿದ. ಮೌನಿ ಗುರುವಿಗೆ ಇದಕ್ಕೂ ಉತ್ತರ ಗೊತ್ತಿರಲಿಲ್ಲ. ಏನಾದರೂ ಹೊಳೆದೀತೇ ಎಂದು ಕೊಂಡು ಛಾವಣಿಯನ್ನೊಮ್ಮೆ ನೆಲವನ್ನೊಮ್ಮೆ ದೃಷ್ಟಿಸಿದ. ಯಾತ್ರಾರ್ಥಿಗೆ ತೃಪ್ತಿಯಾಯಿತು. ಆತ, “ಝೆನ್ ಎಂದರೇನು’ ಎಂದು ಕೇಳಿದ. ಈಗ ಮೌನಿ ನಾಚಿಕೆಯಿಂದ ಕಣ್ಣು ಮುಚ್ಚಿಕೊಂಡ.
ಯಾತ್ರಾರ್ಥಿ, “ಆಶೀರ್ವಾದ ಎಂದ ರೇನು’ ಎಂಬ ಕೊನೆಯ ಪ್ರಶ್ನೆ ಕೇಳಿದ. ಯಾವುದಕ್ಕೂ ತನಗೆ ಉತ್ತರ ತಿಳಿದಿಲ್ಲವಲ್ಲ ಎಂದುಕೊಂಡ ಮೌನಿ ಗುರು ಶರಣಾಗಿ ಎರಡೂ ಕೈಗಳನ್ನು ಅಗಲವಾಗಿ ಚಾಚಿದ.
ಆದರೆ ಯಾತ್ರಾರ್ಥಿಗೆ ಬಹಳ ಸಂತೃಪ್ತಿ ಯಾಗಿತ್ತು. ಆತ ಬಹಳ ಖುಷಿಯಿಂದ ಅಲ್ಲಿಂದ ಹೊರಟು ಹೋದ. ದಾರಿಯಲ್ಲಿ ಆತನಿಗೆ ಪೇಟೆಯಿಂದ ಮರಳು ತ್ತಿದ್ದ ಮೌನಿ ಬಾಬಾನ ಅನು ಯಾಯಿಗಳ ಭೇಟಿ ಯಾಯಿತು. “ನಿಮ್ಮ ಗುರು ಗಳು ಎಂತಹ ಜ್ಞಾನಿ! ನಾನು ಆಶ್ರಮದಿಂದ ಬರುತ್ತಿದ್ದೇನೆ. ಅಲ್ಲಿ ನಾನು ಅವರಿಗೆ ಬುದ್ಧ ಎಂದರೇನು ಎಂದು ಕೇಳಿದೆ. ಅವರು ನಾಲೆªಸೆಗಳಲ್ಲಿ ದೃಷ್ಟಿ ಹರಿಯಿಸಿ, ಬುದ್ಧ ಎಲ್ಲೆಲ್ಲೂ ಇದ್ದಾನೆ ಎಂದರು. ಧರ್ಮ ಎಂದರೇನು ಎಂಬುದಕ್ಕೆ ಮೇಲೆ ಮತ್ತು ಕೆಳಗೆ ದೃಷ್ಟಿ ಹಾಯಿಸಿ ಧರ್ಮವು ಸಂಪೂರ್ಣತ್ವ ಎಂದು ಉತ್ತರಿಸಿದರು. ಝೆನ್ ಬಗೆಗಿನ ಪ್ರಶ್ನೆಗೆ ಕಣ್ಣು ಮುಚ್ಚಿ ಝೆನ್ ಎಂದರೆ ಶೂನ್ಯ ಎಂದರು. ನನ್ನ ಕೊನೆಯ ಪ್ರಶ್ನೆ ಆಶೀರ್ವಾದ ಎಂದರೇನು ಎಂದಾಗಿತ್ತು. ಅದಕ್ಕೆ ಅವರು ಪವಿತ್ರ ಶಕ್ತಿಗಳನ್ನು ನನ್ನತ್ತ ಕಳುಹಿಸುವುದು ಎಂಬರ್ಥದಲ್ಲಿ ಎರಡೂ ಕೈಗಳನ್ನು ಚಾಚಿ ದರು. ಎಂಥ ಶ್ರೇಷ್ಠ ಝೆನ್!’ ಎಂದು ಉದ್ಗರಿಸಿದ.
ಅನುಯಾಯಿಗಳು ಆಶ್ರಮಕ್ಕೆ ಮರಳಿ ದಾಗ ಮೌನಿ ಬಾಬಾ ಅವರಿಬ್ಬರನ್ನೂ ಹಿಗ್ಗಾಮುಗ್ಗಾ ಬೈದ. “ಇವತ್ತು ನನ್ನನ್ನು ಎಂಥ ನಾಚಿಕೆಗೇಡಿಗೆ ಸಿಲುಕಿಸಿದಿರಿ. ಯಾತ್ರಿಯೊಬ್ಬ ಬಂದಿದ್ದ. ಅವನ ಪ್ರಶ್ನೆಗಳಿಗೆ ಒಂದಕ್ಕೂ ಉತ್ತರಿ ಸಲಾಗದೆ ಸತ್ತೇ ಹೋದಂತಾದೆ’ ಎಂದ!
(ಸಾರ ಸಂಗ್ರಹ)