LS Election; ಕಾಂಗ್ರೆಸ್ ಮತ್ತು ಡಿಎಂಕೆ ತಮಿಳು ಸಂಸ್ಕೃತಿಗೆ ಕಳಂಕ ತಂದಿವೆ:ನಡ್ಡಾ ಕಿಡಿ
ಸಂಸತ್ತಿನಲ್ಲಿ ಸೆಂಗೋಲ್ ಸ್ಥಾಪನೆಯಾಗುವಂತೆ ಪ್ರಧಾನಿ ಮೋದಿ ನೋಡಿಕೊಂಡರು
Team Udayavani, Apr 7, 2024, 5:15 PM IST
ತಿರುಮಂಗಲಂ(ತಮಿಳುನಾಡು): ಪ್ರಧಾನಿ ಮೋದಿ ಅವರು ಯಾವಾಗಲೂ ತಮಿಳು ಸಂಸ್ಕೃತಿ, ಭಾಷೆ ಮತ್ತು ಸಾಹಿತ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಅವರು ಯಾವಾಗಲೂ ತಮಿಳು ಕವಿಗಳ ಕವನಗಳನ್ನು ವಾಚಿಸುತ್ತಾರೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ರವಿವಾರ ಹೇಳಿದರು.
ಚುನಾವಣ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ನಡ್ಡಾ, ‘ಸಂಸತ್ತಿನಲ್ಲಿ ಹೊಸ ಕಟ್ಟಡವನ್ನು ನಿರ್ಮಿಸಿದಾಗ ಅಲ್ಲಿ ಸೆಂಗೋಲ್ ಸ್ಥಾಪನೆಯಾಗುವಂತೆ ಪ್ರಧಾನಿ ಮೋದಿ ನೋಡಿಕೊಂಡರು ಆದರೆ, ಕಾಂಗ್ರೆಸ್ ಮತ್ತು ಡಿಎಂಕೆ ಯಾವಾಗಲೂ ತಮಿಳು ಸಂಸ್ಕೃತಿ, ಸನಾತನ ಸಂಸ್ಕೃತಿಗೆ ಕಳಂಕ ತಂದಿವೆ’ ಎಂದು ಕಿಡಿ ಕಾರಿದರು.
ನರೇಂದ್ರ ಮೋದಿ ಅವರಿಗೆ ತಮಿಳುನಾಡಿನ ಬಗ್ಗೆ ವಿಶೇಷ ಪ್ರೀತಿ ಇದೆ.ಆರೋಗ್ಯ, ಮೂಲಸೌಕರ್ಯ ಮತ್ತು ಸಂಪರ್ಕಕ್ಕೆ ಸಂಬಂಧಿಸಿದ ವಿವಿಧ ಅಭಿವೃದ್ಧಿ ಯೋಜನೆಗಳ ಮೂಲಕ ತಮಿಳುನಾಡಿನ ಬೆಳವಣಿಗೆಗೆ ಪ್ರಧಾನಿ ಮೋದಿಯವರು ಒತ್ತು ನೀಡಿದ್ದಾರೆ ಎಂದರು.
ಕೋವಿಡ್ -19 ಸಾಂಕ್ರಾಮಿಕ ಮತ್ತು ಉಕ್ರೇನ್ ಯುದ್ಧದ ಹೊರತಾಗಿಯೂ, ಎಲ್ಲಾ ಆರ್ಥಿಕತೆಗಳು ಛಿದ್ರಗೊಂಡಿವೆ. ನರೇಂದ್ರ ಮೋದಿ ಅವರ ಕ್ರಿಯಾತ್ಮಕ ನಾಯಕತ್ವದಲ್ಲಿ ಭಾರತವು ಬ್ರಿಟನ್ನನ್ನು ಹಿಂದಿಕ್ಕಿ 5 ನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದರು.