ಮುಗಿದ ಅಬ್ಬರ; ಎರಡು ದಿನ ಮನೆ-ಮನೆ ಸಂದಾಯ! 1992ರ ಚುನಾವಣೆ ನೆನಪಿಸಿದ ರಣತಂತ್ರ
Team Udayavani, May 6, 2024, 1:48 PM IST
ಉದಯವಾಣಿ ಸಮಾಚಾರ
ಬಾಗಲಕೋಟೆ: ಲೋಕಸಭೆ ಸಾರ್ವತ್ರಿಕ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಎರಡು ದಿನ ಅಭ್ಯರ್ಥಿಗಳು, ಮುಖಂಡರು ಮನೆ ಮನೆ ಪ್ರಚಾರ (ಸಂದಾಯ) ಮಾಡಲು ಮಾತ್ರ ಅವಕಾಶವಿದೆ. ಹೌದು, ಈ ಬಾರಿಯ ಲೋಕಸಭೆ ಚುನಾವಣೆ ಪ್ರಚಾರ ಕಣ, ಕಳೆದ ಬಾರಿಗಿಂತ ವಿಭಿನ್ನವಾಗಿತ್ತು. ಕಳೆದ ಬಾರಿ, ಜೆಡಿಎಸ್ ಪಕ್ಷ, ಕಾಂಗ್ರೆಸ್ಗೆ ಬೆಂಬಲ ಕೊಟ್ಟಿದ್ದರೆ, ಈ ಬಾರಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಿದೆ. ಇನ್ನು ಭಿನ್ನಮತ ವಿಷಯದಲ್ಲಿ ಮೂರು ಪಕ್ಷಗಳು ಹೊರತಾಗಿಲ್ಲ.
ಕಳೆದ ಬಾರಿಗೆ ಹೋಲಿಸಿದರೆ, ಆಗ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಇತ್ತು. ಆಗ ನರಗುಂದ ಸಹಿತ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಐವರು ಬಿಜೆಪಿ ಶಾಸಕರು ಇದ್ದರೆ, ಕಾಂಗ್ರೆಸ್ನಿಂದ ಇಬ್ಬರು (ಬಾದಾಮಿಯಿಂದ ಸಿದ್ದರಾಮಯ್ಯ) ಶಾಸಕರಿದ್ದರು. ಆಗ ಬಿಜೆಪಿಯಿಂದ ನಾಲ್ಕನೆಯ ಬಾರಿಗೆ ಗದ್ದಿಗೌಡರ ಸ್ಪರ್ಧಿಸಿದ್ದರೆ, ಕಾಂಗ್ರೆಸ್ನಿಂದ ವೀಣಾ ಕಾಶಪ್ಪನವರ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗೆ ಧುಮುಕ್ಕಿದ್ದರು.
ಒಳ ಹೊಡೆತ ಕೆಲಸ ಮಾಡಿತ್ತು: 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳಲ್ಲಿ ಒಳ ಹೊಡೆತ ಕೆಲಸ ಮಾಡಿತ್ತು. ಎರಡೂ ಪಕ್ಷಗಳಲ್ಲಿ ಒಗ್ಗಟ್ಟಿನ ಮಂತ್ರ ಎದ್ದು ಕಂಡರೂ, ಆ ಪಕ್ಷದವರು ಇವರಿಗೆ, ಈ ಪಕ್ಷದವರು ಅವರಿಗೆ ಒಳಗೊಳಗೇ ಮತ ಹಾಕಿಸುವ ತಂತ್ರ ಮಾಡಿದ್ದರು. ಈ ಬಾರಿಯೂ ಆ ವಾಸನೆ ಹೆಚ್ಚಾಗಿಯೇ ಬರುತ್ತಿದೆ ಎನ್ನಲಾಗಿದೆ.
ಸ್ವಾಭಿಮಾನ-ಗ್ಯಾರಂಟಿ ಅಬ್ಬರ: ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ, ಸ್ಟಾರ್ ಪ್ರಚಾರಕರಾದ ಸಿ.ಟಿ. ರವಿ, ಬಸನಗೌಡ ಪಾಟೀಲ ಯತ್ನಾಳ ಸಹಿತ ಹಲವು ನಾಯಕರು ಜಿಲ್ಲೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡಿದ್ದಾರೆ. ಕಾಂಗ್ರೆಸ್ ಹೊರಗಿನವರಿಗೆ ಟಿಕೆಟ್ ಕೊಟ್ಟಿದೆ, ಬಾಗಲಕೋಟೆಯ ಸ್ವಾಭಿಮಾನ ಎತ್ತಿ ಹಿಡಿಯಲು, ಬಿಜೆಪಿಗೆ ಮತ ಹಾಕಿ ಎಂದು ಮತ ಕೇಳಿದರೆ, 20 ವರ್ಷ ಗೆದ್ದಿರುವ ಗದ್ದಿಗೌಡರು ಏನು ಮಾಡಿದ್ದಾರೆ ಎಂಬ ಬಿಜೆಪಿಯ ವೈಫಲ್ಯ ಹಾಗೂ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಭಾವ ತೋರಿಸಿ ಕಾಂಗ್ರೆಸ್ ಮತಯಾಚನೆ ನಡೆಯಿತು.
1992ರ ಮೆಲಕು: ಕಳೆದ 1992ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಯುವಕ ಹಾಗೂ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದ ಸಿದ್ದು ನ್ಯಾಮಗೌಡರು, ಆಗಿನ ಹಾಲಿ ಸಿಎಂ ರಾಮಕೃಷ್ಣ ಹೆಗಡೆ ಅವರನ್ನೇ ಸೋಲಿಸಿದ್ದ ಚುನಾವಣಾ ರಣತಂತ್ರ, ಈ ಬಾರಿಯೂ ಮೆಲಕು ಹಾಕುವಂತೆ ಮಾಡಿದ್ದು ಸುಳ್ಳಲ್ಲ. ಆಗ ಸ್ವತಃ ಮಾಜಿ ಸಿಎಂ ಎಸ್. ಬಂಗಾರಪ್ಪ ಅವರು, ಸ್ಥಳೀಯವಾಗಿ ಬೀಡುಬಿಟ್ಟು ಪ್ರತಿಯೊಂದು ಸಮಾಜದ 1ರಿಂದ 5ರ ವರೆಗಿನ ಮುಖಂಡರನ್ನೂ ಕರೆಸಿ, ಸ್ವತಃ ಮಾತಾಡಿ, ಕಾಂಗ್ರೆಸ್ ಗೆಲ್ಲಿಸಲು ತೊಟ್ಟಿದ್ದರು. ಓರ್ವ ಯುವಕ, ಹೆಗಡೆ ಅವರನ್ನೇ ಸೋಲಿಸಿದ ಖ್ಯಾತಿಯ ಹಿಂದೆ, ಬಂಗಾರಪ್ಪ ಅವರ ರಣತಂತ್ರ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿತ್ತು.
ಈ ಬಾರಿಯೂ ಟ್ರಿಬಲ್ ಶೂಟರ್ ಎಂದೇ ಕರೆಸಿಕೊಳ್ಳುವ ಸಚಿವ ಶಿವಾನಂದ ಪಾಟೀಲ, ಚುನಾವಣೆಗೆ ಸರ್ವ ಸನ್ನದ್ಧರಾಗಿಯೇ ಧುಮುಕಿದ್ದರು. ಪಕ್ಷದಲ್ಲಿನ ಅಸಮಾಧಾನಿತರನ್ನು ಮೊದಲು ಸಮಾಧಾನ ಮಾಡಲು, ಆಕಾಂಕ್ಷಿಗಳಿಗೆ ಕೆಪಿಸಿಸಿ ಮಟ್ಟದಲ್ಲಿ ಜವಾಬ್ದಾರಿ ಕೊಡಿಸಿದ್ದರು. ಜತೆಗೆ ಬಿಜೆಪಿ, ಕಾಂಗ್ರೆಸ್ ಬಂಡಾಯಗಾರರನ್ನು ಸೆಳೆಯುವ ಪ್ರಯತ್ನದಲ್ಲೂ ಯಶಸ್ವಿಯಾಗಿದ್ದರು.
ಎಲ್ಲದಕ್ಕೂ ಮುಖ್ಯವಾಗಿ, ಜಿಲ್ಲೆಯ ಎಲ್ಲ ಜಾತಿಯ ಒಳ ಪಂಗಡದ ಒಟ್ಟು ಮತದಾರರ ಸಂಖ್ಯೆಯ ಗೊಂಚಲು, ಕೈಯಲ್ಲಿ ಹಿಡಿದು, ಆಯಾ ಸಮಾಜದವರನ್ನು ಸ್ವತಃ ಭೇಟಿ ಮಾಡಿ, ಕಾಂಗ್ರೆಸ್ನತ್ತ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಕಾಂಗ್ರೆಸ್ಗೆ ಲಾಭವಾಗಲಿದೆ ಕಾದು ನೋಡಬೇಕು.
ಸ್ವಾಭಿಮಾನದ ತಂತ್ರ: ಕಾಂಗ್ರೆಸ್ ರಣತಂತ್ರದ ಎದುರು, ಬಿಜೆಪಿಯೂ ಹಿಂದೆ ಬೀಳಲಿಲ್ಲ. ಜಿಲ್ಲೆಯ ಸ್ವಾಭಿಮಾನದ ಪ್ರಶ್ನೆಯಾಗಿ, ದೇಶದ ಸುಭದ್ರತೆಗೆ ಮೋದಿ ಗೆಲ್ಲಿಸಿ ಎಂದು ಪ್ರತಿ ತಂತ್ರ ರೂಪಿಸುತ್ತಲೇ ಇದ್ದರು. ದಕ್ಷಿಣಕರ್ನಾಟಕ ಭಾಗದ 14 ಜಿಲ್ಲೆಗಳ ಮತದಾನ ಮುಗಿದ ಬಳಿಕ, ಜಿಲ್ಲೆಯಲ್ಲಿ ಬಿಜೆಪಿಗೆ ಒಂದಷ್ಟು ಚೈತನ್ಯ ಬಂದಿತ್ತು. ಕಾರಣ, ಆ ಭಾಗದಲ್ಲಿ ಬಿಜಿಯಾಗಿದ್ದ ನಾಯಕರೆಲ್ಲ ಉತ್ತರದತ್ತ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಒಟ್ಟಾರೆ, ಸ್ವಾಭಿಮಾನ-ಗ್ಯಾರಂಟಿ ಮಧ್ಯೆ ನಡೆದ
ಬಹಿರಂಗ ಪ್ರಚಾರದ ಅಬ್ಬರ ಕೊನೆಗೊಂಡಿದ್ದು, ಇನ್ನೆರಡು ದಿನ ಮನೆ ಮನೆಗೆ ಸಂದಾಯದ ಕೈಚಳಕ ನಡೆಯಲಿದೆ ಎಂಬ ಮಾತು ಕೇಳಿ ಬರುತ್ತಿದೆ.
■ ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
CM Siddaramaiah ಸೋಲು ಖಚಿತವಾಗುತ್ತಿದ್ದಂತೆ ಮೋದಿ ವಿಚಿತ್ರ ಮಾತು
ಪರಿಷತ್ ಚುನಾವಣೆ: ಮೊದಲ ದಿನ ಸಲ್ಲಿಕೆಯಾಗದ ನಾಮಪತ್ರ
ಲೂಟಿ ಸರಕಾರ ಅಂದ್ರೆ ದಾಖಲೆ ಕೇಳುತ್ತಿದ್ದ ಸಿದ್ದು ಈಗ ಏನು ಮಾಡುತ್ತಾರೆ?: ಅಶೋಕ್
“ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಸಮ್ಮತಿ ವಾಪಸ್: ಕಾನೂನು ಉಲ್ಲಂಘನೆಯಾಗಿಲ್ಲ’
Eshwara Khandre ಪ್ರಧಾನಿ ಮೈಸೂರು ಆತಿಥ್ಯದ ವೆಚ್ಚ ರಾಜ್ಯವೇ ಭರಿಸಲಿದೆ