Kasaragod; 2000 ರೂ. ಮುಖಬೆಲೆಯ 7 ಕೋಟಿ ಮೌಲ್ಯದ ನೋಟುಗಳು ವಶ!!
Team Udayavani, Mar 21, 2024, 5:12 PM IST
ಕಾಸರಗೋಡು:ಹೊಸದುರ್ಗ ಸಮೀಪದ ಅಂಬಲತ್ತರ ಪಾರಪ್ಪಳ್ಳಿ ಗುರುಪುರದ ಬಾಡಿಗೆ ಮನೆಯಲ್ಲಿ ಬಚ್ಚಿಡಲಾಗಿದ್ದ, ಕೇಂದ್ರ ಸರಕಾರ ಅಸಿಂಧುಗೊಳಿಸಿರುವ 2000 ರೂ. ಮುಖಬೆಲೆಯ 7.25 ಕೋಟಿ ರೂ. ಅಸಲಿ ಮತ್ತು ನಕಲಿ ಕರೆನ್ಸಿ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಂಬಲತ್ತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪ್ರಜೀಶ್ ನೇತೃತ್ವದಲ್ಲಿ ಬುಧವಾರ ರಾತ್ರಿ ಕಾರ್ಯಾಚರಣೆ ನಡೆಸಲಾಗಿತ್ತು. ಬೇಕಲ ಡಿವೈಎಸ್ಪಿ ಜಯನ್ ಡೊಮಿನಿಕ್ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಮನೆಯಲ್ಲಿ ಅಕ್ರಮವಾಗಿ ನೋಟುಗಳನ್ನು ಬಚ್ಚಿಟ್ಟಿರುವ ಬಗ್ಗೆ ಲಭಿಸಿದ ರಹಸ್ಯ ಮಾಹಿತಿ ಯನುಸಾರ ಪೊಲೀಸರು ಕಾರ್ಯಾಚರಣೆ ನಡೆಸಿದರು.
ನೋಟು ಪತ್ತೆಯಾದ ಮನೆ ಪಾರಪ್ಪಳ್ಳಿಯ ಬಾಬುರಾಜ್ ಮಾಲಕತ್ವದಲ್ಲಿದೆ. ಅದನ್ನು ಮೂಲತಃ ಪಾಣತ್ತೂರು ನಿವಾಸಿ ಹಾಗೂ ಈಗ ಕಲ್ಯೋಟ್ ನಲ್ಲಿ ವಾಸಿಸುತ್ತಿರುವ ಅಬ್ದುಲ್ ರಝಾಕ್ ಬಾಡಿಗೆಗೆ ಪಡೆದಿದ್ದರು.
7 ವರ್ಷಗಳಿಂದ ಬೇಕಲ ಹದ್ದಾದ್ ನಗರದಲ್ಲಿ ವಾಸಿಸುತ್ತಿರುವ ಕರ್ನಾಟಕದ ಪುತ್ತೂರು ಮೂಲದ ಸುಲೈಮಾನ್ ಎಂಬಾತನ ಸಹವರ್ತಿ ಅಬ್ದುಲ್ ರಝಾಕನು ಸುಲೈಮಾನ್ ವ್ಯವಹಾರಗಳಲ್ಲಿ ಮಧ್ಯವರ್ತಿಯಾಗಿ ಕೆಲಸ ನಿರ್ವಹಿಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಆದರೆ ಅವರ ಅಸಲಿ ವ್ಯವಹಾರ ಏನು ಎಂಬುದನ್ನು ಪೊಲೀಸರು ದೃಢಪಡಿಸಿಲ್ಲ.
ನೋಟುಗಳನ್ನು ಅಂಬಲತ್ತರ ಠಾಣೆಗೆ ಕೊಂಡೊಯ್ಯಲಾಗಿದೆ. ಕೆಲವು ಕಂತೆಗಳಲ್ಲಿ 100ಕ್ಕಿಂತ ಕಡಿಮೆ ನೋಟುಗಳಿದ್ದವು. ನೋಣು ಎಣಿಸುವ ಯಂತ್ರಗಳ ಮೂಲಕ ಎಣಿಕೆ ನಡೆಸಿದಾಗ 7.25 ಕೋಟಿ ರೂ. ಕಂಡು ಬಂದಿದೆ. ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದರಲ್ಲಿ ಖೋಟಾ ನೋಟುಗಳು ಪತ್ತೆಯಾದವು. ಅಸಲಿ ಮತ್ತ ನಕಲಿ ನೋಟುಗಳನ್ನು ಬೇರ್ಪಡಿಸುವ ಕಾರ್ಯದಲ್ಲಿ ಪೊಲೀಸರು ನಿರತರಾಗಿದ್ದಾರೆ.
ಪುತ್ತೂರಿಗೂ ತನಿಖೆ ವಿಸ್ತರಣೆ
ನೋಟುಗಳನ್ನು ವಶಪಡಿಸಿಕೊಂಡ ಬಳಿಕ ಸುಲೈಮಾನ್ ಹಾಗೂ ಅಬ್ದುಲ್ ರಝಾಕ್ ತಲೆಮರೆಸಿಕೊಂಡಿದ್ದು, ಪೊಲೀಸರು ಅವರಿಗಾಗಿ ಶೋಧ ನಡೆಸುತ್ತಿದ್ದಾರೆ.
ಎರಡು ಸಾವಿರ ಮುಖ ಬೆಲೆಯ ಹಣವನ್ನು ಇಲ್ಲಿ ಇರಿಸಿರುವ ಕಾರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪುತ್ತೂರಿಗೂ ತನಿಖೆ ಯನ್ನು ವಿಸ್ತರಿಸಲಾಗಿದೆ.
ಸುಲೈಮಾನ್ ಬೇಕಲ ಬಳಿ ಟೆನ್ನಿಸ್ ಕೋರ್ಟ ನ್ನು ಊರವರಿಗಾಗಿ ನಿರ್ಮಿಸಿ ಕೊಟ್ಟಿದ್ದಾನೆ. ಜನರಿಗೆ ಆರ್ಥಿಕ ನೆರವನ್ನೂ ನೀಡುತ್ತಿದ್ದನು. ಅಲ್ಲೇ ಪಕ್ಕದಲ್ಲಿ ದೊಡ್ಡ ಮನೆಯೊಂದನ್ನು ನಿರ್ಮಿಸುತ್ತಿದ್ದಾನೆ.