Naxalism ಬಗ್ಗುಬಡಿಯಲು ಒಡಿಶಾದಿಂದ ಛತ್ತೀಸ್ಗಢದತ್ತ 3,000 ಸಿಎಪಿಎಫ್ ಯೋಧರು
Team Udayavani, Jan 1, 2024, 1:40 AM IST
ಹೊಸದಿಲ್ಲಿ:ಛತ್ತೀಸ್ಗಢದಲ್ಲಿ ನಕ್ಸಲ್ವಾದವನ್ನು ಸಂಪೂರ್ಣನಾಗಿ ನಿರ್ನಾಮ ಮಾಡಲು ಭದ್ರತಾಪಡೆಗಳು ಪಣತೊಟ್ಟಿದ್ದು, ಒಡಿಶಾದಿಂದ 3,000 ಸಿಬಂದಿಯನ್ನು ಹೊಂದಿರುವ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಮೂರು ಬೆಟಾಲಿಯನ್ಗಳು ಛತ್ತೀಸ್ಗಢದ ಗಡಿಗಳಿಗೆ ಸಂಚಾರ ಆರಂಭಿಸಿವೆ. ಅಲ್ಲದೇ, ಇಷ್ಟೇ ಸಂಖ್ಯೆಯ ಐಟಿಬಿಪಿ ಪಡೆಗಳು ನಕ್ಸಲ್ ಭದ್ರಕೋಟೆಯಾದ ಅಬುಜ್ಮದ್ನಲ್ಲಿ ಬೀಡು ಬಿಡಲಿದ್ದು, ನಕ್ಸಲ್ ನಿರ್ನಾಮಕ್ಕೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (ಸಿಎಪಿಎಫ್) ಸಜ್ಜುಗೊಂಡಿವೆ ಎಂದು ಮೂಲಗಳು ತಿಳಿಸಿವೆ.
ಭಾರತದಲ್ಲಿ ಮಾವೋವಾದವನ್ನು ಕಿತ್ತೂಗೆಯುವ ಕೊನೇ ಹಂತಕ್ಕೆ ತಲುಪಿದ್ದೇವೆ ಹಾಗೂ ಬಿಎಸ್ಎಫ್, ಸಿಆರ್ಪಿಎಫ್, ಐಟಿಬಿಪಿ ಪಡೆಗಳು ಶೀಘ್ರವೇ ನಕ್ಸಲಿಸಂಗೆ ಅಂತ್ಯ ಹಾಡಲಿವೆ ಎಂದು ಝಾರ್ಖಂಡ್ನಲ್ಲಿ ಡಿ. 1ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದರು. ಆ ಬೆನ್ನಲ್ಲೇ ಛತ್ತೀಸ್ಗಢದಲ್ಲಿ ನಕ್ಸಲರನ್ನು ಹತ್ತಿಕ್ಕಲು ಯೋಜನೆ ರೂಪಿಸಲಾಗಿದೆ. ಅದೇ ಕಾರ್ಯತಂತ್ರದ ಭಾಗವಾಗಿ ಈ ಬೆಳವಣಿಗೆ ನಡೆದಿದೆ ಎನ್ನಲಾಗಿದೆ.
ಅದರಂತೆ ಛತ್ತೀಸ್ಗಢದ ನಾರಾಯಣಪುರ ಜಿಲ್ಲೆಯಲ್ಲಿ ಹೊಸ ಕಾರ್ಯಾಚರಣೆ ನೆಲೆಗಳನ್ನು ರೂಪಿಸಲು ಬಿಎಸ್ಎಫ್ಗೆ ನಿರ್ದೇಶಿಸಲಾಗಿದೆ. ಇದಕ್ಕಾಗಿ ಈಗಾಗಲೇ ಒಡಿಶಾದ ಮಲ್ಕನ್ಗಿರಿ ಮೂಲದ ಬೆಟಾಲಿಯನ್ ಛತ್ತೀಸ್ಗಢಕ್ಕೆ ಆಗಮಿಸಿದೆ. ಇತ್ತ ರಾಜನಂದಗಾಂವ್, ಕೊಡಂಗಾಂವ್ನಲ್ಲಿ ಐಟಿಬಿಪಿ ಬೆಟಾಲಿಯನ್ಗಳನ್ನು ಹೊಂದಿದೆ. ಇದೀಗ ಆ ಬೆಟಾಲಿಯನ್ ಅನ್ನು ಅಬುಜ್ಮದ್ಗೆ ವಿಸ್ತರಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.