ಮಾನನಷ್ಟ ನೋಟಿಸ್ ಹರಿದು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಆಕ್ರೋಶ
ದೆಹಲಿ ಲೆಫ್ಟಿನೆಂಟ್ ಗವರ್ನರ್ ಗೆ ಕಳ್ಳ, ಭ್ರಷ್ಟ ವ್ಯಕ್ತಿ ಎಂದ ಆಪ್ ನಾಯಕ
Team Udayavani, Sep 7, 2022, 10:27 PM IST
ನವದೆಹಲಿ: ಖಾದಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಕಳುಹಿಸಿರುವ ಮಾನನಷ್ಟ ನೋಟಿಸ್ ಅನ್ನು ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರು ಬುಧವಾರ ಹರಿದು ಹಾಕಿದ್ದಾರೆ ಮತ್ತು “ಯಾವುದೇ ಕಾನೂನು ನೋಟಿಸ್ಗಳಿಗೆ ನಾನು ಹೆದರುವುದಿಲ್ಲ”ಎಂದು ಹೇಳಿದ್ದಾರೆ.
ಹಿರಿಯ ಎಎಪಿ ನಾಯಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುವಾಗ ಎಲ್-ಜಿಯ ನೋಟಿಸ್ ಅನ್ನು ಹರಿದು ಎಲ್-ಜಿ ಮೇಲೆ ಕಟುವಾದ ವಾಗ್ದಾಳಿ ನಡೆಸಿದರು ಮತ್ತು ಅವರನ್ನು ತಕ್ಷಣವೇ ಸಾಂವಿಧಾನಿಕ ಹುದ್ದೆಯಿಂದ ವಜಾಗೊಳಿಸುವಂತೆ ಕರೆ ನೀಡಿದರು.
ರಾಜ್ಯಸಭಾ ಸದಸ್ಯನಾಗಿ ಸತ್ಯವನ್ನು ಮಾತನಾಡುವ ಹಕ್ಕು ನನಗಿದೆ. ಕಳ್ಳ, ಭ್ರಷ್ಟ ವ್ಯಕ್ತಿ ಕಳುಹಿಸಿರುವ ಈ ಲೀಗಲ್ ನೋಟಿಸ್ಗಳಿಗೆ ನಾನು ಹೆದರುವುದಿಲ್ಲ,” ಎಂದು ನೋಟಿಸ್ ಅನ್ನು ತುಂಡು ಮಾಡುವ ಮೊದಲು ಸಂಜಯ್ ಸಿಂಗ್ ಹೇಳಿದರು.
“2.5 ಲಕ್ಷ ಕುಶಲಕರ್ಮಿಗಳ ಹಣವನ್ನು ಲೂಟಿ ಮಾಡಲಾಗಿದೆ. ನಾವು ಭ್ರಷ್ಟಾಚಾರವನ್ನು ಬಹಿರಂಗಪಡಿಸಿದಾಗ, ಅವರು ಲೀಗಲ್ ನೋಟಿಸ್ ಕಳುಹಿಸುತ್ತಾರೆ. ಲೂಟಿ ಮಾಡಿದ ಹಣವನ್ನು ಎಲ್ಲಿ ಇರಿಸಲಾಗಿದೆ ಎಂಬುದನ್ನು ಕಂಡುಹಿಡಿಯಲು ಎಲ್-ಜಿ ಸಕ್ಸೇನಾ ವಿರುದ್ಧ ಸಿಬಿಐ-ಇಡಿ ತನಿಖೆಯಾಗಬೇಕು. ನಾನು ಅಂತಹ ನೋಟಿಸ್ಗಳನ್ನು 10 ಬಾರಿ ಹರಿದು ಎಸೆಯಬಹುದು ಎಂದು ಸಂಜಯ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.