ಆದಿತ್ಯನಾಥ್ ಸರಕಾರ: 50 ಮೀರಿದ ಅದಕ್ಷ ನೌಕರರಿಗೆ ಕಡ್ಡಾಯ ನಿವೃತ್ತಿ
Team Udayavani, Jul 7, 2017, 6:59 PM IST
ಲಕ್ನೋ : ಐವತ್ತರ ಹರೆಯ ಮೀರಿದ ಆದರೆ ಕೆಲಸ-ಕಾರ್ಯದಲ್ಲಿ ತೃಪ್ತಿಕರ ನಿರ್ವಹಣೆ ತೋರದ ಅಧಿಕಾರಿಗಳನ್ನು ಕಡ್ಡಾಯ ನಿವೃತ್ತಿಗೆ ಶಿಫಾರಸು ಮಾಡಿ ಮನೆಗಟ್ಟಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರ ಇದೀಗ ಸಜ್ಜಾಗಿದೆ.
ಈ ಬಗೆಯ ಸರಕಾರಿ ಉದ್ಯೋಗಿಗಳ ಕಾರ್ಯನಿರ್ವಹಣೆ ಕುರಿತು ಜು.31ಕ್ಕೆ ಅನುಗುಣವಾಗಿ ಪರಾಮರ್ಶೆ ನಡೆಸುವಂತೆ ಮುಖ್ಯ ಕಾರ್ಯದರ್ಶಿ ರಾಜೀವ್ ಕುಮಾರ್ ಅವರು ಸರಕಾರದ ಎಲ್ಲ ವಿಭಾಗಗಳ ಹೆಚ್ಚುವರಿ ಕಾರ್ಯದರ್ಶಿಗಳು, ಮುಖ್ಯ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.
ಕಡ್ಡಾಯ ನಿವೃತ್ತಿಗೆ ಒಳಪಡಿಸುವ ಅಧಿಕಾರಿಗಳು 50ರ ಹರೆಯ ಪೂರ್ತಿಗೊಳಿಸಿರುವುದನ್ನು ಈ ವರ್ಷ ಮಾರ್ಚ್ 31ರ ದಿನಾಂಕಕ್ಕೆ ನಿಗದಿಸಲಾಗಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.
“ಸರಕಾರದ ಈ ಆದೇಶದಲ್ಲಿ ಹೊಸತೇನೂ ಇಲ್ಲ; ಏಕೆಂದರೆ 50ರ ಹರೆಯ ಪೂರ್ತಿಗೊಳಿಸಿರುವ ಮತ್ತು ತೃಪ್ತಿಕರ ಕಾರ್ಯನಿರ್ವಹಣೆ ತೋರದವರನ್ನು ಕಡ್ಡಾಯ ನಿವೃತ್ತಿಗೆ ಒಳಪಡಿಸುವ ಅವಕಾಶ ಸರಕಾರದ ಸಿಬಂದಿ ನಿಯಮಗಳಲ್ಲೇ ಇದೆ’ ಎಂದು ಸರಕಾರಿ ವಕ್ತಾರರೋರ್ವರು ಹೇಳಿದ್ದಾರೆ.