ಕಿಡ್ನಾಪ್ ಆರೋಪ; ವಿಕೆ ಶಶಿಕಲಾ, ಪಳನಿಸ್ವಾಮಿ ವಿರುದ್ಧ FIR
Team Udayavani, Feb 15, 2017, 2:57 PM IST
ಚೆನ್ನೈ:ಅಕ್ರಮ ಆಸ್ತಿ ಪ್ರಕರಣದಲ್ಲಿ ದೋಷಿಯಾಗಿರುವ ವಿಕೆ ಶಶಿಕಲಾ ನಟರಾಜನ್, ಸುಧಾಕರನ್ ಹಾಗೂ ಇಳವರಸಿ ಬೆಂಗಳೂರು ವಿಶೇಷ ಕೋರ್ಟ್ ಮುಂದೆ ಶರಣಾಗಲು ಆಗಮಿಸುತ್ತಿದ್ದರೆ, ಮತ್ತೊಂದೆಡೆ ಶಶಿಕಲಾ ಮತ್ತು ಕೆ.ಪಳನಿಸ್ವಾಮಿ ವಿರುದ್ಧ ಬುಧವಾರ ಕೋವತ್ತೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ತಮ್ಮನ್ನು ಬಲವಂತದಿಂದ ಕಿಡ್ನಾಪ್ ಮಾಡಿರುವುದಾಗಿ ಆರೋಪಿಸಿ ಎಐಎಡಿಎಂಕೆ ಶಾಸಕ ಎಸ್.ಸರವಣನನ್ ಅವರು ಕೋವತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಎಸ್.ಎಸ್.ಸರವಣನನ್ ಅವರು ದಕ್ಷಿಣ ಮದುರೈ ಕ್ಷೇತ್ರದ ಶಾಸಕ. ಅವರು ಸೋಮವಾರ ಗೋಲ್ಡನ್ ಬೇ ರೆಸಾರ್ಟ್ ನ ಗೋಡೆ ಹಾರಿ ತಪ್ಪಿಸಿಕೊಂಡು ಬಂದಿದ್ದರು.
ಗವರ್ನರ್ ಬುಲಾವ್ ಸಾಧ್ಯತೆ:
ಇಂದು ಸಂಜೆಯೊಳಗೆ ರಾಜ್ಯಪಾಲ ವಿದ್ಯಾಸಾಗರ ರಾವ್ ಅವರು ಸರ್ಕಾರ ರಚನೆಗೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಅಲ್ಲದೇ ಶಶಿಕಲಾ ಬಣದ ಪಳನಿಸ್ವಾಮಿ ನೇತೃತ್ವದ ಶಾಸಕರಿಗೆ ಹಾಗೂ ಪನ್ನೀರ್ ಸೆಲ್ವಂ ಬಣಗಳಿಗೆ ಆಹ್ವಾನ ಕೊಡುವ ಸಾಧ್ಯತೆ ಇದೆ ಎಂದು ಮಾಧ್ಯಮಗಳ ವರದಿ ತಿಳಿಸಿದೆ.