Ananthkumar Hegde ಸಂವಿಧಾನ ಹೇಳಿಕೆ: ಪ್ರಧಾನಿ ಮೋದಿ ಸ್ಪಷ್ಟನೆ ಕೇಳಿದ ಖರ್ಗೆ
Team Udayavani, Mar 12, 2024, 1:04 AM IST
ಹೊಸದಿಲ್ಲಿ: “ಸಂವಿಧಾನವನ್ನು ಬದಲಾಯಿಸಬೇಕು’ ಎಂದು ಕರ್ನಾಟಕದ ಸಂಸದ ಅನಂತ್ಕುಮಾರ್ ಹೆಗಡೆ ನೀಡಿದ್ದ ಹೇಳಿಕೆಗೆ ಸಂಬಧಿಸಿದಂತೆ ಕಾಂಗ್ರೆಸ್ ತನ್ನ ವಾಗ್ಧಾಳಿಯನ್ನು ಮುಂದುವರೆಸಿದೆ. ಸೋಮವಾರ ದೆಹಲಿಯಲ್ಲಿ ಈ ಬಗ್ಗೆ ಮಾತನಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಇಂಥ ಹೇಳಿಕೆಗಳು ದೇಶದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಬಹುದು. ಹೀಗಾಗಿ ಪ್ರಧಾನಿ ಮೋದಿಯವರೇ ಈ ಕುರಿತು ಸ್ಪಷ್ಟನೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.
ಈ ಹಿಂದೆಯೂ ಬಿಜೆಪಿಯ ಹಲವು ನಾಯಕರು ಇಂಥ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ, ಮೋದಿಯವರು ಆ ಕುರಿತು ಒಂದೇ ಒಂದು ಮಾತನ್ನೂ ಆಡದೆ, ಮೌನಕ್ಕೆ ಶರಣಾಗಿದ್ದರು. ತಮ್ಮ ಪಕ್ಷದ ನಾಯಕರಿಗೆ ಇಂಥ ಹೇಳಿಕೆಗಳನ್ನು ನೀಡಲು ಮೋದಿ ಅವಕಾಶ ನೀಡುತ್ತಿರುವುದೇಕೆ ಎಂದೂ ಪ್ರಶ್ನಿಸಿದರು.
ಸಂವಿಧಾನವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಬಿಜೆಪಿಗೆ ಸಾಧ್ಯವಾಗಿಲ್ಲ ಎಂದು ಹೇಳಲು ನನಗೆ ಬೇಸರವಾಗುತ್ತಿದೆ. ಸಂವಿಧಾನವನ್ನು ಬದಲಾಯಿಸಲು ಹೊರಟರೆ ದೇಶದಲ್ಲಿ ಕ್ರಾಂತಿಯಾಗುತ್ತದೆ ಎಂದು ಹೇಳಿದ್ದಾರೆ.