ಮೃತ ಪತಿಗೆ ದೇಗುಲ ಕಟ್ಟಿದ ಪತ್ನಿ!
Team Udayavani, Aug 15, 2021, 6:58 AM IST
ವಿಶಾಖಪಟ್ಟಣಂ: 2018ರಲ್ಲಿ ಕರ್ನಾಟಕದ ಚಾಮರಾಜ ನಗರ ಜಿಲ್ಲೆಯ ಯಳಂದೂರು ತಾಲೂಕಿನ ಕೃಷ್ಣಾಪುರ ಎಂಬ ಹಳ್ಳಿಯಲ್ಲಿ ರಾಜುಸ್ವಾಮಿ ಎಂಬ ರೈತ, ತನ್ನ ಮೃತ ಪತ್ನಿಗೆ ದೇವಾಲಯ ಕಟ್ಟಿದ್ದ. ಅದೇ ರೀತಿ, ಆಂಧ್ರಪ್ರದೇಶದ ಮಹಿಳೆಯೊಬ್ಬಳು ತನ್ನ ದಿವಂಗತ ಗಂಡನಿಗಾಗಿ ದೇವಸ್ಥಾನ ಕಟ್ಟಿ ಆತನ ಮೂರ್ತಿಗೇ ದಿನವೂ ಪೂಜೆ ಸಲ್ಲಿಸುತ್ತಿದ್ದಾಳೆ! ಪ್ರೀತಿಸಿದವರಿಗಾಗಿ ತಾಜ್ಮಹಲ್ ಕಟ್ಟಿದ ದೇಶದಲ್ಲಿ ಇದೀಗ ಅಂಥದ್ದೇ ಹೊಸ ಕಥೆಗಳು ಹೊರಬರುತ್ತಿವೆ!
ಆಂಧ್ರದ ಪ್ರಕಾಶಂ ಜಿಲ್ಲೆಯ ನಿಮ್ಮವರಂ ಗ್ರಾಮದ ನಿವಾಸಿ ಪದ್ಮಾವತಿ ಗಂಡನಿಗಾಗಿ ದೇವಸ್ಥಾನ ನಿರ್ಮಿಸಿರುವ ಮಹಿಳೆ. ಆಕೆಯ ಪತಿ ಅಂಕಿರೆಡ್ಡಿ 4 ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದರು. ಇತ್ತೀಚೆಗೆ ಅವರು ಪತ್ನಿ ಪದ್ಮಾವತಿಯ ಕನಸಿನಲ್ಲಿ ಬಂದು, “ನನಗಾಗಿ ಒಂದು ದೇವಸ್ಥಾನ ನಿರ್ಮಿಸು’ ಎಂದು ಹೇಳಿದರಂತೆ. ಅದರಂತೆ ಆಕೆ ದೇಗುಲ ನಿರ್ಮಿಸಿ ಅದರಲ್ಲಿ ಅಂಕಿರೆಡ್ಡಿಯ ಅಮೃತಶಿಲೆಯ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾಳೆ.
ಗಂಡ ಹೇಳಿದಂತೆ, ಮೂರ್ತಿಗೆ ಪೂಜೆ ಮಾಡಿ, ಸುತ್ತಮುತ್ತಲಿನ ಬಡವರಿಗೆ ಉಚಿತ ಅನ್ನ ಸಂತರ್ಪಣೆಯನ್ನೂ ಮಾಡುತ್ತಿದ್ದಾಳೆ. ದೇವಸ್ಥಾನ ನಿರ್ಮಾಣಕ್ಕೆ ಮಗ ಶಿವಶಂಕರ್, ಗಂಡನ ಸ್ನೇಹಿತರು ಸಾಕಷ್ಟು ಸಹಾಯ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.