ರಾಮ ಗಂಗಾ ನದೀ ದಂಡೆಗೆ ಇ-ತ್ಯಾಜ್ಯ ಎಸೆವವರಿಗೆ 1 ಲಕ್ಷ ರೂ. ದಂಡ: NGT
Team Udayavani, May 3, 2017, 3:44 PM IST
ಹೊಸದಿಲ್ಲಿ : ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿನ ರಾಮಗಂಗಾ ನದೀ ದಂಡೆಯಲ್ಲಿ ಇ-ತ್ಯಾಜ್ಯಗಳನ್ನು ಎಸೆಯುವವರು, ಪರಿಸರ ಪರಿಹಾರ ರೂಪದಲ್ಲಿ 1 ಲಕ್ಷ ರೂ. ದಂಡ ತೆರಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಹೇಳಿದೆ.
ಎನ್ಜಿಟಿ ಅಧ್ಯಕ್ಷ ಜಸ್ಟಿಸ್ ಸ್ವತಂತರ್ ಕುಮಾರ್ ನೇತೃತ್ವದ ಪೀಠವು ಸಂಬಂಧಿತ ಇಲಾಖಾ ಪ್ರತಿನಿಧಿಗಳ ಒಂದು ಸಮಿತಿಯನ್ನು ರಚಿಸಿ ರಾಮಗಂಗಾ ನದೀ ದಂಡೆಯಲ್ಲಿ ಗುಡ್ಡೆ ಹಾಕಲಾಗಿರುವ ಇ-ತ್ಯಾಜ್ಯಗಳನ್ನು ಈ ಕೂಡಲೇ ಖಾಲಿ ಮಾಡಿಸಿ ಎರಡು ವಾರಗಳ ಒಳಗೆ ತನಗೆ ವರದಿ ಸಲ್ಲಿಸುವಂತೆ ಆದೇಶಿಸಿದೆ.
ನ್ಯಾಯ ಪೀಠವು ರಚಿಸಿರುವ ಸಮಿತಿಯಲ್ಲಿ ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಅಥವಾ ಅವರ ನಾಮಾಂಕಿತ ವ್ಯಕ್ತಿ, ಮೊರಾದಾಬಾದ್ನ ಜಿಲ್ಲಾ ಮ್ಯಾಜಿಸ್ಟ್ರೇಟ್, ಉತ್ತರ ಪ್ರದೇಶ ಸರಕಾರದ ಪ್ರತಿನಿಧಿ, ಮೊರಾದಾಬಾದ್ ನಗರ ನಿಗಮದ ಪ್ರತಿನಿಧಿ ಹಾಗೂ ಡಿವೈಎಸ್ಪಿ ಸದಸ್ಯರಾಗಿ ಇದ್ದಾರೆ.