ನವಜಾತ ಹೆಣ್ಣು ಶಿಶುವನ್ನು ಬಕೆಟ್ನಲ್ಲಿ ಮುಳುಗಿಸಿ ಕೊಂದ ಜವಾನ
Team Udayavani, Nov 18, 2017, 4:23 PM IST
ಜೈಪುರ : ಸೇನಾ ಜವಾನನೊಬ್ಬ ತನ್ನ 3 ದಿನಗಳ ಹೆಣ್ಣು ಮಗುವನ್ನು ತನ್ನ ಮನೆಯಲ್ಲಿ ಬಕೆಟ್ ನೀರಿನಲ್ಲಿ ಮುಳುಗಿಸಿ ಕೊಂದು ಬಳಿಕ ಆಕೆಯ ಶವವನ್ನು ಹುಗಿದ ಅತ್ಯಂತ ಅಮಾನುಷ ಮತ್ತು ಭೀಭತ್ಸಕರ ಘಟನೆ ರಾಜಸ್ಥಾನದ ಚುರು ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆರೋಪಿ ಸೇನಾ ಜವಾನ ಅಶೋಕ್ ಜಾಟ್ ಎಂಬಾತ ನಿನ್ನೆ ಶುಕ್ರವಾರ ಚುರು ಜಿಲ್ಲೆಯ ಘಾಸ್ಲಾ ಅಗೂನಾ ಗ್ರಾಮದಲ್ಲಿನ ತನ್ನ ಮನೆಯಲ್ಲಿ ಈ ರಾಕ್ಷಸೀ ಕೃತ್ಯ ನಡೆಸಿದನೆಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಮಂಗಳವಾರ ಅಶೋಕ್ ಜಾಟ್ಗೆ ಎರಡನೇ ಹೆಣ್ಣು ಮಗು ಹುಟ್ಟಿತ್ತು. ಇದರಿಂದ ಕುಪಿತನಾಗಿದ್ದ ಆತ ನಿಷ್ಕರುಣೆಯ ಈ ಕೃತ್ಯ ಎಸಗಿದ ಎಂದು ಪೊಲೀಸರು ಆತನ ಪತ್ನಿ ಪ್ರಿಯಾಂಕಾ ನೀಡಿರುವ ದೂರಿನ ಆಧಾರದಲ್ಲಿ ಹೇಳಿದ್ದಾರೆ.
ಪೊಲೀಸರು ಉಪ ವಿಭಾಗೀಯ ಮ್ಯಾಜಿಸ್ಟ್ರೇಟರ ಸಮ್ಮುಖದಲ್ಲಿ ಮಗುವಿನ ಶವವನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಈ ಪ್ರಕರಣದ ಬಗ್ಗೆ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ; ವಿಷಯ ತನಿಖೆಯಲ್ಲಿರುವುದರಿಂದ ಈ ತನಕ ಆರೋಪಿಯನ್ನು ಬಂಧಿಸಿಲ್ಲ ಎಂದು ತಾರಾ ನಗರ ಪೊಲೀಸ್ ಠಾಣೆಯ ಎಸ್ಎಚ್ಓ ರಾಮಚಂದ್ರ ತಿಳಿಸಿದ್ದಾರೆ.