ಬಾಂಗ್ಲಾ ಗಡಿಯಲ್ಲಿ ಹಠಾತ್ ಗುಂಡಿನ ದಾಳಿ
ಬಿಎಸ್ಎಫ್ ಯೋಧ ಹುತಾತ್ಮ
Team Udayavani, Oct 18, 2019, 4:40 AM IST
ಕೋಲ್ಕತಾ: ಸಾಮಾನ್ಯವಾಗಿ ಶಾಂತವಾಗಿರುತ್ತಿದ್ದ ಬಾಂಗ್ಲಾದೇಶ-ಭಾರತ ಅಂತಾರಾಷ್ಟ್ರೀಯ ಗಡಿಯಲ್ಲಿ ಗುರುವಾರ ಗುಂಡಿನ ದಾಳಿ ನಡೆದಿದ್ದು, ಬಿಎಸ್ಎಫ್ನ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಇನ್ನೊಬ್ಬ ಯೋಧಗೆ ಗಾಯವಾ ಗಿದೆ. ಪಶ್ಚಿಮ ಬಂಗಾಲದ ಪದ್ಮಾ ನದಿ ಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರನ್ನು ಬಾಂಗ್ಲಾ ದೇಶದ ಗಡಿ ಭದ್ರತಾ ಪಡೆ (ಬಿಜಿಬಿ) ವಶಪಡಿಸಿ ಕೊಂಡಿತ್ತು. ಇವರನ್ನು ಬಿಡಿಸಲು ತೆರಳಿದ್ದಾಗ ಬಾಂಗ್ಲಾದೇಶದ ಯೋಧನೊಬ್ಬ ಬಿಎಸ್ಎಫ್ ಯೋಧರ ತಂಡದ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ.
ಇದು ಉನ್ನತ ಅಧಿಕಾರ ವಲಯದಲ್ಲಿ ಪ್ರಮುಖವಾಗಿ ಚರ್ಚೆಯಾಗಿದ್ದು, ಬಾಂಗ್ಲಾ ದೇಶದ ಸೇನಾಪಡೆ ಮತ್ತು ಬಿಎಸ್ಎಫ್ ಮುಖ್ಯಸ್ಥರು ಈ ಕುರಿತು ಹಾಟ್ಲೆನ್ ಮೂಲಕ ಸಂವಾದ ನಡೆಸಿದ್ದಾರೆ. ಕೇಂದ್ರ ಗೃಹ ಸಚಿವಾಲಯ ಕೂಡ ಈ ಬಗ್ಗೆ ವರದಿ ಪಡೆದುಕೊಂಡಿದೆ. ಈ ಘಟನೆಯಿಂದ ಬಾಂಗ್ಲಾ-ಭಾರತ ಗಡಿಯಲ್ಲಿ ಆತಂಕದ ವಾತಾವರಣವೂ ನಿರ್ಮಾಣವಾಗಿದೆ.
ಪದ್ಮಾ ನದಿಯಲ್ಲಿ ಮೂವರು ಭಾರ ತೀಯ ಮೀನುಗಾರರು ಬಿಎಸ್ಎಫ್ ಅನುಮತಿಯೊಂದಿಗೆ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಜಲಗಡಿ ಉಲ್ಲಂಘಿಸಿದ ಆರೋ ಪದಲ್ಲಿ ಬಾಂಗ್ಲಾದೇಶದ ಪಡೆ ಇವರನ್ನು ವಶಪಡಿಸಿಕೊಂಡಿತ್ತು. ಅನಂತರ ಮಾತುಕತೆಯ ಬಳಿಕ ಇಬ್ಬರನ್ನು ಬಾಂಗ್ಲಾ ದೇಶ ಬಿಡುಗಡೆ ಮಾಡಿತ್ತಾದರೂ, ಒಬ್ಬ ನನ್ನು ಬಿಡುಗಡೆ ಮಾಡಿರಲಿಲ್ಲ. ಈ ಮೀನುಗಾರನ ಬಿಡುಗಡೆ ಕುರಿತು ಮಾತುಕತೆಗಾಗಿ ಆರು ಬಿಎಸ್ಎಫ್ ಅಧಿಕಾರಿಗಳ ತಂಡವು ಬೋಟ್ನಲ್ಲಿ ತೆರಳಿತ್ತು. ಆದರೆ, ಬಾಂಗ್ಲಾ ಯೋಧರು ವ್ಯಗ್ರರಾಗಿದ್ದುದನ್ನು ಕಂಡು ಬಿಎಸ್ಎಫ್ ಯೋಧರು ವಾಪಸಾಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಾಂಗ್ಲಾ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ.