ಅಪ್ರಚೋದಿತ ದಾಳಿ ನಡೆಸಿದ್ರೆ ಅದೇ ರೀತಿ ತಕ್ಕ ಉತ್ತರ: ಪಾಕ್ ಗೆ ಭಾರತ
Team Udayavani, Sep 29, 2017, 8:43 PM IST
ಜಮ್ಮು-ಕಾಶ್ಮೀರ:ಕಳೆದ ಕೆಲವು ತಿಂಗಳಿನಿಂದ ಗಡಿಭಾಗದಲ್ಲಿ ಮುಂದುವರಿದ ಅಪ್ರಚೋದಿತ ಗುಂಡಿನ ದಾಳಿ ಹಿನ್ನೆಲೆಯಲ್ಲಿ ಶುಕ್ರವಾರ ಬಿಎಸ್ಎಫ್ ಕಮಾಂಡರ್ಸ್ ಹಾಗೂ ಪಾಕಿಸ್ತಾನಿ ರೇಂಜರ್ಸ್ ಮಾತುಕತೆ ನಡೆಸಿದರು.
ಗಡಿ ಭದ್ರತಾ ಪಡೆಯ ವಕ್ತಾರರು ಈ ಬಗ್ಗೆ ಮಾಹಿತಿ ನೀಡಿದ್ದು, ಅಂತಾರಾಷ್ಟ್ರೀಯ ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡಲು ಉಭಯ ದೇಶಗಳು ಮಾತುಕತೆ ವೇಳೆ ಒಪ್ಪಿರುವುದಾಗಿ ತಿಳಿಸಿದರು.
ಈ ಹಿಂದಿನ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಅನುಷ್ಠಾನದ ಕುರಿತಾಗಿಯೂ ಉಭಯ ಕಡೆಯಿಂದಲೂ ಸಕಾರಾತ್ಮಕ ನಿಲುವು ವ್ಯಕ್ತವಾಗಿದೆ. ಏತನ್ಮಧ್ಯೆ ಒಂದು ವೇಳೆ ಪಾಕಿಸ್ತಾನದ ಕಡೆಯಿಂದ ಯಾವುದೇ ರೀತಿಯಿಂದ ಪ್ರಚೋದನಕಾರಿ ಕ್ರಮವಾಗಲಿ, ದಾಳಿಯಾಗಲಿ ನಡೆದಲ್ಲಿ ಅದಕ್ಕೆ ನಾವು ಕೂಡಾ ಕಠಿಣ ರೀತಿಯಲ್ಲೇ ತಿರುಗೇಟು ನೀಡುವುದಾಗಿ ಭಾರತ ಮಾತುಕತೆ ವೇಳೆ ಸ್ಪಷ್ಟಪಡಿಸಿರುವುದಾಗಿ ವರದಿ ತಿಳಿಸಿದೆ.
ಸುಮಾರು 105 ನಿಮಿಗಳ ಕಾಲ ನಡೆದ ಮಾತುಕತೆಯಲ್ಲಿ ಪಾಕಿಸ್ತಾನಿ ರೇಂಜರ್ಸ್ ಬಳಿ ಪ್ರಚೋದನಕಾರಿ ದಾಳಿ ನಡೆಸದಂತೆ ಮನವಿ ಮಾಡಿಕೊಂಡಿರುವುದಾಗಿ ವಕ್ತಾರರು ಪಿಟಿಐಗೆ ಹೇಳಿದ್ದಾರೆ.