ಹಿಂದೂಗಳ “ಮಿಸ್ಸಿಂಗ್ ಲಿಂಕ್’ ಶೋಧಕ್ಕೆ ಮುಂದಾದ ಕೇಂದ್ರ
Team Udayavani, Mar 7, 2018, 9:05 AM IST
ಹೊಸದಿಲ್ಲಿ: ಹಿಂದೂಗಳು ಮೂಲತಃ ಭಾರತದವರೇ ಅಥವಾ ಬೇರೊಂದು ಭೂಭಾಗದಿಂದ ಸಹಸ್ರಾರು ವರ್ಷಗಳ ಹಿಂದೆ ವಲಸೆ ಬಂದವರೇ ಎಂಬ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಹೊಸದೊಂದು ಸಂಶೋಧನೆ ಕೈಗೊಳ್ಳಲು ಕೇಂದ್ರ ಸರಕಾರ ನಿರ್ಧರಿಸಿದೆ.
ಇದಕ್ಕಾಗಿ, 6 ತಿಂಗಳ ಹಿಂದೆಯೇ ವಿದ್ವಾಂಸರ ಸಮಿತಿಯೊಂದನ್ನು, ಪ್ರಧಾನಿ ಮೋದಿ ರಚಿಸಿದ್ದು, ಸಮಿತಿಯ ಅಧ್ಯಕ್ಷರನ್ನಾಗಿ ಕೆ.ಎನ್.ದೀಕ್ಷಿತ್ ಅವರನ್ನು ನೇಮಿಸಲಾಗಿದೆ. ಸಮಿತಿಯ ಮೇಲುಸ್ತುವಾರಿಯನ್ನು ಕೇಂದ್ರ ಸಂಸ್ಕೃತಿ ಇಲಾಖೆ ಸಚಿವ ಮಹೇಶ್ ಶರ್ಮಾ ಅವರಿಗೆ ವಹಿಸಲಾಗಿದ್ದು, ಈ ಸಮಿತಿಯ ವರದಿಯ ಆಧಾರದ ಮೇರೆಗೆ, ಭಾರತವು ಆದಿಯಿಂದಲೂ ಹಿಂದೂ ರಾಷ್ಟ್ರವಾಗಿತ್ತೆಂಬುದನ್ನು ಸಾರುವ ನಿರೀಕ್ಷೆಯನ್ನು ಸರಕಾರ ಹೊಂದಿದೆ ಎಂದು “ರಾಯrರ್ಸ್’ ಸುದ್ದಿಸಂಸ್ಥೆ ವರದಿ ಮಾಡಿದೆ.
ಸಮಿತಿಯ ಕೆಲಸವೇನು? :
ಸಮಿತಿಯ ಅಧ್ಯಕ್ಷ ಕೆ.ಎನ್. ದೀಕ್ಷಿತ್ ಅವರ ಪ್ರಕಾರ, “ನಮ್ಮ ಸಮಿತಿಗೆ ಭಾರತದ ಚರಿತ್ರೆಯ ಬಗ್ಗೆ ಸಂಶೋಧನೆ ನಡೆಸಿ, ಅದರ ವರದಿ ಸಲ್ಲಿಸಲು ಸೂಚಿಸಲಾಗಿದೆ. ನಮ್ಮ ವರದಿಯ ಆಧಾರದ ಮೇಲೆ ಸರಕಾರ, ಭಾರತದ ಮೂಲ ನಿವಾಸಿಗಳ ಬಗ್ಗೆ ಹೊಸ ವ್ಯಾಖ್ಯಾನ ಕೊಡಲಿದೆ’ ಎಂದು ತಿಳಿಸಿದ್ದಾರೆ.
ಸಮಿತಿ ವರದಿ ಅನಂತರ ಏನು?
ತನ್ನ ನಿರೀಕ್ಷೆಯಂತೆಯೇ ಸಂಶೋಧನಾ ವರದಿ ಬಂದರೆ, ಹಿಂದೂಗಳು ಮೂಲತಃ ಭಾರತದವರೇ ಎಂದು ಘೋಷಣೆ ಮಾಡಲು ಸರಕಾರ ಆಲೋಚಿಸಿದೆ. ಇದನ್ನು ಶಾಲಾ ಕಾಲೇಜುಗಳ ಪಠ್ಯಪುಸ್ತಕದಲ್ಲಿ ಸೇರ್ಪಡೆಗೊಳಿಸಿ, ಹಿಂದುತ್ವದ ಹಿರಿಮೆಯನ್ನು ಸಾರಿ ಹೇಳಲು ಸರಕಾರ ನಿರ್ಧರಿಸಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.