ಪುಟ್ಟ ಸ್ವಾತಂತ್ರ್ಯೋತ್ಸವ ; ಕವಾಯತು, ಧ್ವಜಾರೋಹಣ, ಪ್ರಧಾನಿ ಮೋದಿ ಭಾಷಣ ಮಾತ್ರ
Team Udayavani, Jul 25, 2020, 6:27 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಐತಿಹಾಸಿಕ ಕೆಂಪುಕೋಟೆಯಲ್ಲಿ ಪ್ರತೀ ಬಾರಿ ಬಗೆ ಬಗೆಯ ಕಾರ್ಯಕ್ರಮಗಳಿಂದ ದೇಶವಾಸಿಗಳ ಹೃನ್ಮನ ತುಂಬಿಕೊಳ್ಳುತ್ತಿದ್ದ ಸ್ವಾತಂತ್ರ್ಯೋತ್ಸವ ಈ ಬಾರಿ ಚುಟುಕಾಗಿ ಜರಗಲಿದೆ.
ಕಾರ್ಯಕ್ರಮವನ್ನು ಅತ್ಯಂತ ಸರಳವಾಗಿ, ಸೀಮಿತ ಗಣ್ಯರ ಉಪಸ್ಥಿತಿಯೊಂದಿಗೆ ಆಯೋಜಿಸಲಾಗುತ್ತದೆ ಎಂದು ಕೇಂದ್ರ ಮಾನವ ಸಂಪದಭಿವೃದ್ಧಿ ಸಚಿವಾಲಯವು ತಿಳಿಸಿದೆ.
ಧ್ವಜಾರೋಹಣದ ಜತೆಗೆ ದಿಲ್ಲಿ ಪೊಲೀಸರ ಕವಾಯತು, ಪ್ರಧಾನಿ ಮೋದಿ ಭಾಷಣಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಮಿತ ಸಂಖ್ಯೆಯ ವಿದೇಶಿ ಗಣ್ಯರು, ರಾಜತಂತ್ರಜ್ಞರು, ಸಚಿವರು, ಉನ್ನತಾಧಿಕಾರಿಗಳು ಮಾತ್ರ ಹಾಜರಿರುತ್ತಾರೆ. ದಿಲ್ಲಿ ಪೊಲೀಸ್ ಸಿಬಂದಿಗೆ ಪಿಪಿಇ ಕಿಟ್ ನೀಡಲಾಗುತ್ತದೆ. ಎನ್ಸಿಸಿ ಕೆಡೆಟ್ಗಳನ್ನು ತಪಾಸಣೆ ಮತ್ತಿತರ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತದೆ.
2 ಧ್ಯೇಯ ಮನವರಿಕೆ
‘ಆತ್ಮನಿರ್ಭರ ಭಾರತ’ ಘೋಷವಾಕ್ಯ ಮತ್ತು ಸಾಮಾಜಿಕ ಅಂತರವನ್ನು ಜನಜೀವನದ ಮೂಲಮಂತ್ರವಾಗಿ ಮನವರಿಕೆ ಮಾಡಿಕೊಡಲು ಈ ಬಾರಿಯ ಸ್ವಾತಂತ್ರ್ಯೋತ್ಸವ ಸಮಾರಂಭವನ್ನು ಬಳಸಿಕೊಳ್ಳುವುದಾಗಿ ಸಚಿವಾಲಯ ತಿಳಿಸಿದೆ.
ರಾಜ್ಯಗಳಿಗೂ ನಿರ್ದೇಶನ
ಕೋವಿಡ್ 19 ಕಾರಣಕ್ಕಾಗಿ ಈ ಬಾರಿ ಸ್ವಾತಂತ್ರ್ಯೋತ್ಸವವನ್ನು ಸರಳವಾಗಿ ಆಚರಿಸಬೇಕು ಎಂದು ಕೇಂದ್ರ ಗೃಹ ಇಲಾಖೆಯು ಎಲ್ಲ ರಾಜ್ಯ ಸರಕಾರಗಳಿಗೆ ಸೂಚಿಸಿದೆ.