ಕಾಶ್ಮೀರಕ್ಕೆ ಸ್ವಾಯತ್ತೆ ನೀಡುವ ವಿಚಾರ ಪರಿಶೀಲಿಸಿ: ಚಿದು
Team Udayavani, Oct 29, 2017, 7:10 AM IST
ರಾಜ್ಕೋಟ್: ಜಮ್ಮು ಮತ್ತು ಕಾಶ್ಮೀರಕ್ಕೆ ಸ್ವಾಯತ್ತೆ ನೀಡುವ ವಿಚಾರವನ್ನು ಪರಿಶೀಲಿಸಬೇಕು ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಹೇಳಿದ್ದಾರೆ. ಕಣಿವೆ ರಾಜ್ಯದ ಕೆಲಪ್ರದೇಶಗಳಿಗೆ ಹೆಚ್ಚಿನ ಸ್ವಾಯತ್ತೆ ನೀಡಬೇಕು. ಆಗ ಸಂವಿಧಾನದ 370ನೇ ವಿಧಿಯಲ್ಲಿ ಹೇಳಿರುವಂತೆ ಅಲ್ಲಿನ ಜನರಿಗೆ ಹೆಚ್ಚಿನ ಅಧಿಕಾರ ಕೊಟ್ಟಂತಾಗುತ್ತದೆ ಎಂದು ರಾಜ್ಕೋಟ್ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ರಾಜ್ಯದ ಜನರ ಜತೆಗಿನ ತಮ್ಮ ಮಾತುಕತೆ ವೇಳೆ ಹೆಚ್ಚಿನವರು ಸ್ವಾಯತ್ತೆಗೆ ಒಲವು ವ್ಯಕ್ತಪಡಿಸಿದ್ದಾರೆ. ಅವರು ಆಜಾದಿ ಬಯಸುತ್ತಾರೆ ಎಂದರೆ ವಾಸ್ತವದಲ್ಲಿ ಸ್ವಾಯತ್ತತೆ ಬಯಸುತ್ತಾರೆ ಎಂದರ್ಥ ಎಂದಿದ್ದಾರೆ.
ಇದೇ ವೇಳೆ, ನೋಟು ಅಮಾನ್ಯ ಮತ್ತು ಜಿಎಸ್ಟಿಯಿಂದ ದೇಶದ ಸಾಮಾನ್ಯ ವರ್ಗಕ್ಕೆ ಆಘಾತವಾಗಿದೆ ಎಂದು ಅವರು ಹೇಳಿದ್ದಾರೆ. ಸ್ನೇಹಮಯ ತೆರಿಗೆ ವ್ಯವಸ್ಥೆ ಜಾರಿ ಮಾಡಿದರೆ ಜನರು ಸ್ವಯಂ ಪ್ರೇರಿತವಾಗಿಯೇ ಪಾವತಿ ಮಾಡುತ್ತಾರೆ. ಮನೆಯಲ್ಲಿ ಸೊಳ್ಳೆ ಇದೆ ಎಂದರೆ ಸೊಳ್ಳೆಯನ್ನು ನಾಶ ಮಾಡಬೇಕೇ ವಿನಾ ಮನೆಗೆ ಬೆಂಕಿ ಹಚ್ಚುವುದಲ್ಲ ಎಂದು ಚಿದಂಬರಂ ಲೇವಡಿ ಮಾಡಿದ್ದಾರೆ.