ತಿರುವನಂತಪುರ: ವಿತ್ತ ಸಚಿವರನ್ನು ವಜಾಗೊಳಿಸಿ
Team Udayavani, Oct 27, 2022, 10:15 PM IST
ಕಣ್ಣೂರು/ತಿರುವನಂತಪುರ: ಕೇರಳ ಸರ್ಕಾರ ಮತ್ತು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ನಡುವಿನ ಬಿಕ್ಕಟ್ಟು ಮತ್ತೂಂದು ಹಂತ ಪ್ರವೇಶಿಸಿದೆ. ವಿತ್ತ ಸಚಿವ ಕೆ.ಎನ್.ಬಾಲಗೋಪಾಲ್ ತಮ್ಮ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಹೀಗಾಗಿ, ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ರಾಜ್ಯಪಾಲರು ಸಿಎಂ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದಾರೆ. ಆದರೆ, ಈ ಸಲಹೆಯನ್ನು ಮುಖ್ಯಮಂತ್ರಿ ತಿರಸ್ಕರಿಸಿದ್ದು, ವಿತ್ತ ಸಚಿವರ ಬಗ್ಗೆ ತಮಗೆ ವಿಶ್ವಾಸ ಇದೆ. ಈ ನಿಟ್ಟಿನಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗದು. ರಾಜ್ಯಪಾಲರು ತಮ್ಮ ನಿಲುವು ಗೌರವಿಸಬೇಕು ಎಂದು ಪ್ರತ್ಯುತ್ತರ ಬರೆದಿದ್ದಾರೆ.
ಕೇರಳದಲ್ಲಿ 9 ವಿವಿಗಳ ಕುಲಪತಿಗಳನ್ನು ವಜಾ ಮಾಡಬೇಕು ಎಂದು ರಾಜ್ಯಪಾಲರು ಪಟ್ಟು ಹಿಡಿದಿರುವಂತೆಯೇ ಹೊಸ ಬೆಳವಣಿಗೆ ನಡೆದಿದೆ. ರಾಜ್ಯಪಾಲರು ಮುಖ್ಯಮಂತ್ರಿಗೆ ಬರೆದ ಪತ್ರದ ಬಗ್ಗೆಯೂ ಈಗ ಪರ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ.
ನಿರ್ಣಯ ಅಂಗೀಕಾರ:
ಮತ್ತೂಂದು ಮಹತ್ವದ ಬೆಳವಣಿಗೆಯಲ್ಲಿ ಕಣ್ಣೂರು ವಿವಿ ಕುಲಪತಿ ರಾಜೀನಾಮೆ ನೀಡಬೇಕು ಎಂದು ಆದೇಶ ಹೊರಡಿಸಿದ್ದ ಕುಲಾಧಿಪತಿ ಮತ್ತು ರಾಜ್ಯಪಾಲ ಖಾನ್ ವಿರುದ್ಧವೇ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.