“ಭಗವದ್ಗೀತೆಯಿಂದ ಭ್ರಷ್ಟಾಚಾರ ತಡೆ ಸಾಧ್ಯ’
Team Udayavani, Nov 26, 2017, 6:55 AM IST
ಕುರುಕ್ಷೇತ್ರ: ಭಗವದ್ಗೀತೆ ಬೋಧನೆಯಿಂದ ಮಾತ್ರವೇ ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ ಎಂದು ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.
ಇಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಗೀತ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಸಮಾಜದಲ್ಲಿರುವ ಭ್ರಷ್ಟಾಚಾರ ಪ್ರಮಾಣ ತಗ್ಗಿಸಲು ನಾವು ಕಾನೂನಿನ ಮೊರೆ ಹೋಗುತ್ತಿದ್ದೇವೆ. ಆದರೆ ಎಲ್ಲಾ ಹಂತಗಳಲ್ಲೂ ಇದನ್ನು ತಡೆಯಲು ನಾವು ಜನರ ಜೀವನ ಮಟ್ಟ ಹೆಚ್ಚಿಸಬೇಕು. ಇದು ಭಗವದ್ಗೀತೆಯಿಂದ ಮಾತ್ರ ಸಾಧ್ಯ. ದೇಶದ ರಾಜಕಾರಣಕ್ಕೂ ಗೀತೆ ದಿಕ್ಕು ತೋರುತ್ತದೆ’ ಎಂದು ಹೇಳಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್, “ಭಗವದ್ಗೀತೆಯು ಮನುಷ್ಯನೊಳಗಿನ ದ್ವಂದ್ವ ಹಾಗೂ ಸಂಘರ್ಷಕ್ಕೆ ಪರಿಹಾರ ಒದಗಿಸುತ್ತದೆ,’ ಎಂದರಲ್ಲದೆ, ಈ ಡಿಜಿಟಲ್ ಯುಗದ ಪಾಪಗಳಿಂದ ಮುಕ್ತರಾಗಬೇಕೆಂದರೆ ಗೀತೆಯ ಸಾರವನ್ನು ಅರಿಯಬೇಕು ಎಂದೂ ಹೇಳಿದರು.