ಬಿಜೆಪಿ ಆದ್ಯತೆ ಅಭಿವೃದ್ಧಿಯೇ ಹೊರತು ಮತವಲ್ಲ: ಮೋದಿ
Team Udayavani, Sep 24, 2017, 7:20 AM IST
ಶೆಹೆನ್ಶಾಪುರ: ಬಿಜೆಪಿ ಮಾಡುತ್ತಿರುವ ರಾಜಕೀಯ ಅಭಿವೃದ್ಧಿಗಾಗಿಯೇ ಹೊರತು ಮತ ಗಳಿಕೆಗೆ ಅಲ್ಲ. ನಮ್ಮ ಪಕ್ಷಕ್ಕೆ ದೇಶದ ಅಭಿವೃದ್ಧಿಯೇ ಮೊದಲು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸ್ವ ಕ್ಷೇತ್ರ ವಾರಾಣಸಿಯ ಎರಡನೇ ದಿನ ಪ್ರವಾಸ ಪ್ರಯುಕ್ತ ಶೆಹೆನ್ಶಾಪುರದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಕೆಲವು ರಾಜಕಾರಣಿಗಳು ಮತ ಬರುವ ಯೋಜನೆಗ ಳಿದ್ದರೆ ಮಾತ್ರ ಕೆಲಸ ಮಾಡುತ್ತಾರೆ. ಆದರೆ ನಾವು ಬೇರೆಯೇ ದಾರಿಯಲ್ಲಿ ಬೆಳೆದು ಬಂದಿದ್ದೇವೆ. ದೇಶದ ಅಭಿವೃದ್ಧಿಯೇ ಆದ್ಯತೆ ಹೊರತು ಮತಗಳಲ್ಲ’ ಎಂದು ಪ್ರತಿಪಕ್ಷಗಳತ್ತ ವಾಗ್ಬಾಣ ಎಸೆದಿದ್ದಾರೆ. ಸರ್ಕಾರ ಇರುವುದು ರಾಜಕೀಯ ಮಾಡುವುದಕ್ಕಾಗಿ ಅಲ್ಲ ಅಥವಾ ಚುನಾವಣೆಯಲ್ಲಿ ಜಯ ಸಾಧಿಸುವುದಕ್ಕೆ ಅಲ್ಲ. ಬದಲಾಗಿ ದೇಶದ ಅಭಿವೃದ್ಧಿಗೇ ಆದ್ಯತೆ ನೀಡಬೇಕು ಎಂದಿದ್ದಾರೆ ಪ್ರಧಾನಿ. ದೇಶದಲ್ಲಿ ಇನ್ನೂ ನೂರಾರು ಕೋಟಿ ಮಂದಿ ಸೂರು ಇಲ್ಲದೇ ಇದ್ದಾರೆ. ಅವರಿಗೆ 2022ನೇ ಇಸ್ವಿಯ ಒಳಗಾಗಿ ಮನೆ ಒದಗಿಸಲು ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯವೆಸಗುತ್ತಿದೆ ಎಂದು ಹೇಳಿದರು.