ವಾಹನ ಚಾಲನೆ ವೇಳೆ ರೀಲ್ಸ್ ಶೂಟ್: ಯುವಕರ ಹುಚ್ಚಾಟಕ್ಕೆ ತಾಯಿ – ಮಗ ಸೇರಿ ನಾಲ್ವರು ದುರ್ಮರಣ
Team Udayavani, Jan 6, 2024, 3:25 PM IST
ಜೈಪುರ: ಕಾರು ಚಲಾಯಿಸುತ್ತಲೇ ರೀಲ್ಸ್ ಮಾಡಲು ಹೋದ ಪರಣಾಮ ಭೀಕರ ಅಪಘಾತ ಸಂಭವಿಸಿ ನಾಲ್ವರು ಮೃತಪಟ್ಟಿರುವ ಘಟನೆ ರಾಜಸ್ಥಾನದ ಜೈಸಲ್ಮೇರ್ ನಲ್ಲಿ ಶುಕ್ರವಾರ(ಜ.5 ರಂದು) ನಡೆದಿದೆ.
ಜೈಸಲ್ಮೇರ್ನ ದೇವಿಕೋಟ್ ಇಂಟರ್ಸೆಕ್ಷನ್ನಲ್ಲಿ ಈ ಘಟನೆ ನಡೆದಿದ್ದು,ಒಂದೇ ಕಾರಿನಲ್ಲಿ ನಾಲ್ವರು ಯುವಕರು ವೇಗವಾಗಿ ಬರುತ್ತಿದ್ದರು. ವೇಗವಾಗಿ ಚಲಿಸುತ್ತಿರುವ ಕಾರಿನ ಕುರಿತು ರೀಲ್ಸ್ ಮಾಡಲು ಹೋಗಿದ್ದಾರೆ. ಪರಿಣಾಮ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ದಾಟಲು ಯತ್ನಿಸುತ್ತಿದ್ದ ತಾಯಿ – ಮಗನ ಮೇಲೆ ಹರಿದಿದೆ. ಆ ಬಳಿಕ ವ್ಯಾನ್ ವೊಂದಕ್ಕೆ ಢಿಕ್ಕಿಯಾಗಿದೆ, ರಸ್ತೆ ಬದಿಯಿದ್ದ ಹಸು ಮೇಲೂ ಹರಿದು ಪಲ್ಟಿಯಾಗಿದೆ.
ಘಟನೆಯ ಪರಿಣಾಮ 13 ವರ್ಷದ ಬಾಲಕ ಮನೀಶ್ ಮತ್ತು ಆತನ ತಾಯಿ ಮೆಂಕಾಲಾ ಮೃತಪಟ್ಟಿದ್ದು, ಇನ್ನು ಕಾರಿನಲ್ಲಿದ್ದ ಬಹ್ವಾನಿ ಸಿಂಗ್ ಮತ್ತು ರೋಶನ್ ಖಾನ್ ಸ್ಥಳದಲ್ಲೇ ಪ್ರಾಣ ತೆತ್ತಿದ್ದಾರೆ. ಅಪಘಾತದಲ್ಲಿ ಇನ್ನಿಬ್ಬರು ಮಕ್ಕಳು ಗಾಯಗೊಂಡಿದ್ದು, ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದು ರಸ್ತೆಯಲ್ಲಿದ್ದ ಹಸು ಕೂಡ ಸಾವನ್ನಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿದ್ದ ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಘಾತ ಸಂಭವಿಸಿದ ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಯುವಕರು ಮೊದಲು ಪೊಲೀಸ್ ಬ್ಯಾರಿಕೇಡ್ ನ್ನು ತಪ್ಪಿಸಿಕೊಂಡು ಬಂದಿದ್ದಾರೆ. ತಪಾಸಣೆಗಾಗಿ ಚೆಕ್ಪಾಯಿಂಟ್ನಲ್ಲಿ ಅವರನ್ನು ತಡೆಯಲು ಪೊಲೀಸ್ ಅಧಿಕಾರಿಗಳು ಪ್ರಯತ್ನಿಸಿದರೂ ನಿಲ್ಲಿಸಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಯುವಕರು ಪೊಲೀಸ್ ಚೆಕ್ಪೋಸ್ಟ್ನಲ್ಲಿ ನಿಲ್ಲಿಸಿದ್ದರೆ, ಅನಾಹುತ ತಪ್ಪಿಸಬಹುದಾಗಿತ್ತು ಮತ್ತು ಘಟನೆಯಲ್ಲಿ ಸಾವನ್ನಪ್ಪಿದ ನಾಲ್ವರ ಪ್ರಾಣವನ್ನು ಉಳಿಸಬಹುದಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಅಪಘಾತದ ಸಂದರ್ಭದಲ್ಲಿ ಯುವಕರು ಕುಡಿದ ಮತ್ತಿನಲ್ಲಿದ್ದರು ಎಂದು ವರದಿ ತಿಳಿಸಿದೆ.