ಮೇಕೆದಾಟು ಯೋಜನೆ: ಡಿಕೆಶಿ, ಸ್ಟಾಲಿನ್ ವಿರುದ್ಧ ಪಳನಿ ವಾಗ್ಧಾಳಿ
Team Udayavani, Jul 3, 2023, 7:00 AM IST
ಚೆನ್ನೈ: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ, ತಮಿಳುನಾಡು ವಿರೋಧಪಕ್ಷದ ನಾಯಕ ಎಡಪ್ಪಾಡಿ ಕೆ.ಪಳನಿಸ್ವಾಮಿ, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಜಲಾಶಯ ಕಟ್ಟುವುದು ಖಚಿತ ಎಂದು ಶಿವಕುಮಾರ್ ಹೇಳುತ್ತಿದ್ದಾರೆ. ಅದಕ್ಕೆ ಸ್ಟಾಲಿನ್ ಬಲವಾದ ವಿರೋಧವನ್ನೇ ಎತ್ತುತ್ತಿಲ್ಲ. ಕರ್ನಾಟಕ ಕಟ್ಟಲು ಉದ್ದೇಶಿಸಿರುವ ಅಣೆಕಟ್ಟು ತಮಿಳುನಾಡಿನ ಹಿತಾಸಕ್ತಿಗೆ ವಿರುದ್ಧ ಪಳನಿಸ್ವಾಮಿ ಹೇಳಿದ್ದಾರೆ.
ತಾನು ಮುಖ್ಯಮಂತ್ರಿಯಾಗಿದ್ದಾಗ (2018) ತೀವ್ರವಾದ ವಿರೋಧ ವ್ಯಕ್ತಪಡಿಸಿದ್ದೆ. ಅನಂತರ ಕಾವೇರಿ ನಿರ್ವಹಣಾ ಪ್ರಾಧಿಕಾರದಲ್ಲಿ (ಸಿಎಂಎ) ಮೇಕೆದಾಟು ವಿಚಾರ ಪ್ರಸ್ತಾಪವೇ ಆಗಲಿಲ್ಲ. ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮತ್ತೆ ಮೇಕೆದಾಟು ಬಗ್ಗೆ ಮಾತುಗಳು ಶುರುವಾಗಿವೆ. ಪಪೆಟ್ ರೀತಿ ವರ್ತಿಸುತ್ತಿರುವ ಸ್ಟಾಲಿನ್ ಬಲವಾದ ಪ್ರತ್ಯುತ್ತರ ನೀಡಿದ್ದರೆ, ಕರ್ನಾಟಕ ಮತ್ತೆ ಆ ಯತ್ನ ಮಾಡುತ್ತಿರಲಿಲ್ಲ. ಡಿಎಂಕೆ ತಮಿಳುನಾಡಿನ ಹಿತವನ್ನು ಬಲಿಕೊಡುತ್ತಿದೆ ಎಂದು ಪಳನಿ ಹೇಳಿದ್ದಾರೆ.