ಯುಪಿ ಅಸೆಂಬ್ಲಿಯಲ್ಲಿ ಸ್ಫೋಟಕ ಪತ್ತೆ
Team Udayavani, Jul 15, 2017, 4:10 AM IST
ಲಕ್ನೋ: ಉತ್ತರಪ್ರದೇಶ ವಿಧಾನಸಭೆಯಲ್ಲಿ ಭಾರೀ ಅನಾಹುತ ತಪ್ಪಿದೆ. ವಿಪಕ್ಷ ನಾಯಕರು ಕುಳಿತುಕೊಳ್ಳುವ ಜಾಗದಲ್ಲಿ ಪ್ಲಾಸ್ಟಿಕ್ ಸ್ಫೋಟಕ ಪುಡಿ ಪತ್ತೆಯಾಗಿದ್ದು, ಭದ್ರತಾ ಲೋಪದ ಬಗ್ಗೆ ಆತಂಕ ಉಂಟಾಗಿದೆ. ಈ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಉನ್ನತ ಮಟ್ಟದ ಸಮಿತಿ ಸಭೆ ನಡೆಸಿ, ಪ್ರಕರಣದ ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ದಳಗೆ (ಎನ್ಐಎ) ಸೂಚಿಸಿದ್ದಾರೆ.
ಜು.12ರಂದು ವಿಧಾನ ಸಭೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಸಿಬಂದಿಗೆ, ವಿಪಕ್ಷ ನಾಯಕ ರಾಮ್ ಗೋವಿಂದ್ ಚೌದರಿ ಅವರ ಆಸನದ ಬಳಿ ಪೊಟ್ಟಣವೊಂದರಲ್ಲಿ ಬಿಳಿ ಬಣ್ಣದ ಪುಡಿ ದೊರೆತಿತ್ತು. ಆರಂಭದಲ್ಲಿ ಇದೊಂದು ಸಾಮಾನ್ಯ ಪೌಡರ್ ಇರಬಹುದು ಎಂದು ಊಹಿಸಲಾಗಿತ್ತಾದರೂ, ಎಫ್ಎಸ್ಎಲ್ ಪರೀಕ್ಷೆ ಅನಂತರ ಅದು ಅಪಾಯಕಾರಿ ಸ್ಫೋಟಕ ಎಂಬುದು ದೃಢಪಟ್ಟಿತ್ತು. ಈ ಸಂಬಂಧ ಶುಕ್ರವಾರ ಅಧಿವೇಶನ ಆರಂಭಕ್ಕೆ ಮುನ್ನವೇ ತುರ್ತು ಭದ್ರತಾ ಸಭೆ ನಡೆಸಿದ ಸಿಎಂ ಯೋಗಿ, ಪ್ರಕರಣವನ್ನು ಎನ್ಐಎಗೆ ವಹಿಸಿರುವ ಕುರಿತು ಮಾಹಿತಿ ನೀಡಿದರು.