ಗಂಗಾ ಹೋರಾಟ: ಮತ್ತೂಬ್ಬ ಸಂತ ಆಸ್ಪತ್ರೆಗೆ ದಾಖಲು
Team Udayavani, Oct 14, 2018, 6:00 AM IST
ರಿಶಿಕೇಶ್/ಡೆಹ್ರಾಡೂನ್: ಗಂಗಾ ನದಿ ರಕ್ಷಣೆಗೆ 111 ದಿನ ಉಪವಾಸ ಕೈಗೊಂಡಿದ್ದ ಪ್ರೊ.ಜಿ.ಡಿ.ಅಗರ್ವಾಲ್ ನಿಧನರಾಗಿ 2 ದಿನ ಕಳೆಯುತ್ತಲೇ, ಶನಿವಾರ ಮತ್ತೂಬ್ಬ ಹೋರಾಟಗಾರ ಸಂತ ಗೋಪಾಲದಾಸ (36)ರನ್ನು ರಿಶಿಕೇಶ್ನಲ್ಲಿರುವ ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ಆಸ್ಪತ್ರೆಗೆ ಬೆಳಗ್ಗೆ 3.45ಕ್ಕೆ ದಾಖಲಿಸಲಾಗಿದೆ. ಅವರು 110 ದಿನಗಳಿಂದ ಉಪವಾಸ ಮಾಡಿ, ಹೋರಾಟ ನಡೆಸುತ್ತಿದ್ದರು. ಅವರ ಆರೋಗ್ಯ ಸ್ಥಿತಿ ಈಗಾಗಲೇ ಹದಗೆಟ್ಟಿದೆ. ಜತೆಗೆ ದೇಹ ನೀರಿನ ಕೊರತೆ ಎದುರಿಸುತ್ತಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ಡಾಕ್ಟರ್ ಮೀನಾಕ್ಷಿ ಧರ್ ಹೇಳಿದ್ದಾರೆ. ಬದರಿನಾಥ ಸುತ್ತಮುತ್ತಲಿನ ಗಂಗಾ ನದಿ ವ್ಯಾಪ್ತಿಯಲ್ಲಿ ಗಣಿಗಾರಿಕೆ ತಡೆಯಬೇಕು ಎನ್ನುವುದು ಅವರ ಒತ್ತಾಯ.
ಆಶ್ರಮದ ವಿರುದ್ಧ ಕೇಸು: ಈ ನಡುವೆ ಪ್ರೊ.ಜಿ.ಡಿ.ಅಗರ್ವಾಲ್ ಸಾವಿಗೆ ಸಂಬಂಧಿಸಿದಂತೆ ಏಮ್ಸ್ ಆಸ್ಪತ್ರೆಯು ಮೈತ್ರಿ ಸದನ ಎಂಬ ಆಶ್ರಮದ ವಿರುದ್ಧ ಕೇಸು ದಾಖಲಿಸಲು ಚಿಂತನೆ ನಡೆಸುತ್ತಿದೆ. ಅವರ ಸಾವಿನಲ್ಲಿ ಸಂಚು ಇದೆ ಎಂದು ಆಶ್ರಮ ಆರೋಪಿಸಿರುವ ಹಿನ್ನೆಲೆಯಲ್ಲಿ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆ ಯೋಚಿಸ ಲಾಗುತ್ತಿದೆ ಎಂದು ಏಮ್ಸ್ ನಿರ್ದೇಶಕ ರವಿಕಾಂತ್ ಹೇಳಿದ್ದಾರೆ. ಇದೇ ವೇಳೆ ಅಗರ್ವಾಲ್ ಅವರನ್ನು ಹತ್ಯೆ ಮಾಡಲಾಗಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಎಂದು ಅಶ್ರಮದ ಸ್ವಾಮಿ ಅಮುಕ್ತೇಶ್ವರಾನಂದ್ ಹೇಳಿದ್ದಾರೆ.