ಒಬಿಸಿಗೆ ಮೀಸಲು ಇಲ್ಲದೆ ಚುನಾವಣೆ ನಡೆಸಿ: ಕೋರ್ಟ್
Team Udayavani, Dec 28, 2022, 6:35 AM IST
ಲಕ್ನೋ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಉತ್ತರ ಪ್ರದೇಶ ಸರಕಾರ ಹೊರಡಿಸಿದ್ದ ಕರಡು ಅಧಿಸೂಚನೆಯನ್ನು ಅಲಹಾಬಾದ್ ಹೈಕೋರ್ಟ್ನ ವಿಭಾಗೀಯ ಪೀಠ ರದ್ದುಗೊಳಿಸಿದೆ.
ಜತೆಗೆ ಇತರೆ ಹಿಂದುಳಿದ ವರ್ಗ(ಒಬಿಸಿ)ಗಳಿಗೆ ಮೀಸಲಾತಿ ಇಲ್ಲದೆಯೇ ಚುನಾವಣೆ ನಡೆಸುವಂತೆ ಆದೇಶಿಸಿದೆ.
ನ್ಯಾ. ಡಿ.ಕೆ.ಉಪಾಧ್ಯಾಯ ಮತ್ತು ನ್ಯಾ. ಸೌರವ್ ಲವನೀಯ ಅವರನ್ನು ಒಳಗೊಂಡ ನ್ಯಾಯಪೀಠ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಬಿಸಿಗೆ ಮೀಸಲಾತಿ ನೀಡುವ ಸಂಬಂಧ ಉತ್ತರ ಪ್ರದೇಶ ಸರಕಾರ ಡಿ.5ರಂದು ಹೊರಡಿಸಿದ್ದ ಕರಡು ಅಧಿಸೂಚನೆಯನ್ನು ರದ್ದುಪಡಿಸಿದೆ.
ಸುಪ್ರೀಂ ಕೋರ್ಟ್ ಸೂಚಿಸಿದ ತ್ರಿವಳಿ ಸೂತ್ರವನ್ನು ಅನುಸರಿಸದೆಯೇ ಒಬಿಸಿ ಮೀಸಲು ಕರಡನ್ನು ಸಿದ್ಧಪಡಿಸಲಾಗಿದೆ ಎಂದು ಆರೋಪಿಸಿ ಪಿಐಎಲ್ ಸಲ್ಲಿಸಲಾಗಿತ್ತು.
ಮೀಸಲು ಸಂಬಂಧ ಉತ್ತರ ಪ್ರದೇಶ ಸರಕಾರ ಆಯೋಗ ಒಂದನ್ನು ರಚಿಸ ಲಿದೆ. ತ್ರಿವಳಿ ಸೂತ್ರದ ಅಡಿಯಲ್ಲಿಯೇ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಬಿಸಿಗೆ ಮೀಸಲು ಕಲ್ಪಿಸಲಾಗುವುದು. ಬಳಿಕವಷ್ಟೇ ಚುನಾವಣೆ ನಡೆಸಲಾಗುವುದು.
-ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶ ಸಿಎಂ