ಗೆಳತಿಗೆ ಮೆಸೇಜ್ ಮಾಡಿದಕ್ಕೆ ಸ್ನೇಹಿತನ ಶಿರಚ್ಛೇದ ಮಾಡಿ, ಹೃದಯವನ್ನು ಹೊರ ತೆಗೆದ ವ್ಯಕ್ತಿ
ಇಬ್ಬರಿಗೂ ಒಂದೇ ಯುವತಿ ಮೇಲೆ ಆಗಿತ್ತು ಪ್ರೀತಿ.
Team Udayavani, Feb 26, 2023, 10:45 AM IST
ಹೈದರಾಬಾದ್: ಸ್ನೇಹಿತ ತನ್ನ ಗೆಳತಿಯ ಜೊತೆ ಮಾತನಾಡಿದಕ್ಕೆ ಹಾಗೂ ಮೆಸೇಜ್ ಮಾಡಿದಕ್ಕೆ ವ್ಯಕ್ತಿಯೊಬ್ಬ ಆತನನ್ನು ಭೀಕರವಾಗಿ ಹತ್ಯೆಗೈದು ಪೊಲೀಸರಿಗೆ ಶರಣಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಘಟನೆ ಹಿನ್ನೆಲೆ: ಒಂದೇ ಕಾಲೇಜಿನಲ್ಲಿ ನವೀನ್, ಹರಿಹರ ಕೃಷ್ಣ ಓದುತ್ತಿದ್ದರು. ಅದೇ ಕಾಲೇಜಿನಲ್ಲಿ ಯುವತಿಯೂ ಓದುತ್ತಿದ್ದಳು. ನವೀನ್, ಹರಿಹರ ಕೃಷ್ಣ ಇಬ್ಬರಿಗೂ ಒಂದೇ ಯುವತಿ ಮೇಲೆ ಪ್ರೀತಿ ಆಗುತ್ತದೆ. ಮೊದಲು ನವೀನ್ ಯುವತಿಗೆ ತನ್ನ ಪ್ರೀತಿಯನ್ನು ಹೇಳಿ ಪ್ರಪೋಸ್ ಮಾಡುತ್ತಾನೆ. ಯುವತಿ ನವೀನ್ ಪ್ರೀತಿಯನ್ನು ಒಪ್ಪಿ, ಆತನೊಂದಿಗೆ ಒಂದಷ್ಟು ದಿನ ಡೇಟಿಂಗ್ ಮಾಡಿ, ಬಳಿಕ ಇಬ್ಬರೂ ದೂರವಾಗುತ್ತಾರೆ. ಆ ನಂತರ ಹರಿಹರ ಕೃಷ್ಣನ ಪ್ರೀತಿಯನ್ನು ಒಪ್ಪುತ್ತಾರೆ. ಯುವತಿ ಹರಿಹರ ಕೃಷ್ಣನೊಂದಿಗೆ ಪ್ರೀತಿಯಲ್ಲಿದ್ದರೂ, ಆಗಾಗ ತನ್ನ ಮಾಜಿ ಗೆಳೆಯ ನವೀನ್ ನೊಂದಿಗೆ ಮಾತುಕತೆ,ಮೆಸೇಜ್ ಮಾಡುತ್ತಿದ್ದಳು.
ಸ್ನೇಹಿತ ನವೀನ್ ತನ್ನ ಗರ್ಲ್ ಫ್ರೆಂಡ್ ನೊಂದಿಗೆ ಮಾತನಾಡುವುದು, ಮೆಸೇಜ್ ಮಾಡುವುದು ಹರಿಹರ ಕೃಷ್ಣನಿಗೆ ತಿಳಿಯುತ್ತದೆ. ಇದೇ ಸಿಟ್ಟನ್ನು ಸಹಿಸಿಕೊಂಡಿದ್ದ ಹರಿಹರ ಕೃಷ್ಣ ಶುಕ್ರವಾರ ( ಫೆ.24 ರಂದು) ನವೀನ್ ನನ್ನು ಕೊಲೆಗೈದು, ಆತನ ಶಿರಚ್ಛೇದ ಮಾಡಿ, ಆತನ ಹೃದಯವನ್ನು ಹೊರ ತೆಗೆದು, ಖಾಸಗಿ ಅಂಗ ಹಾಗೂ ಬೆರಳುಗಳನ್ನು ಕತ್ತರಿಸಿ, ಆ ಬಳಿಕ ಪೊಲೀಸರಿಗೆ ತಾನು ಅಪರಾಧವೆಸಗಿದ್ದೇನೆ ಎಂದು ಠಾಣೆಗೆ ಹೋಗಿ ಶರಣಾಗಿದ್ದಾನೆ.
ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಮೆಸೇಜ್ ಮಾಡುವ ವಿಚಾರವಾಗಿ ನವೀನ್ ಹಾಗೂ ಹರಿಹರ ಕೃಷ್ಣನ ನಡುವೆ ಫೆ.17 ರಂದು ಜಗಳವಾಗಿತ್ತು.