ಕಾಂಗ್ರೆಸ್ನಲ್ಲಿ ಬಾಡಿಗೆದಾರನಲ್ಲ; ಪಾಲುದಾರ: ಮನೀಶ್ ತಿವಾರಿ
Team Udayavani, Feb 17, 2022, 10:30 PM IST
ನವದೆಹಲಿ: ಕಾಂಗ್ರೆಸ್ಗೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ತಾವು ಪಕ್ಷದಲ್ಲಿ ಬಾಡಿಗೆದಾರನಲ್ಲ, ಪಾಲುದಾರ ವ್ಯಕ್ತಿ ಎಂದು ಕೇಂದ್ರದ ಮಾಜಿ ಸಚಿವ ಮನೀಷ್ ತಿವಾರಿ ಗುರುವಾರ ಸ್ಪಷ್ಟಪಡಿಸಿದ್ದಾರೆ.
ನಲವತ್ತು ವರ್ಷಗಳಿಂದ ತಾವು ಪಕ್ಷದ್ದಾಗಿ ದುಡಿದಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಒಂದು ವೇಳೆ ತಮ್ಮನ್ನು ಬಲವಂತವಾಗಿ ಪಕ್ಷದಿಂದ ಹೊರಹಾಕಿದರೆ, ಅದು ಬೇರೆ ವಿಚಾರ ಎಂದು “ಎಎನ್ಐ’ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಕೇಂದ್ರದ ಕಾನೂನು ಖಾತೆ ಮಾಜಿ ಸಚಿವ ಅಶ್ವನಿ ಕುಮಾರ್ ರಾಜೀನಾಮೆ ನೀಡಿದ ಬೆನ್ನಲ್ಲಿಯೇ ಮನೀಶ್ ತಿವಾರಿ ಪಕ್ಷ ತೊರೆಯಲಿದ್ದಾರೆ ಎಂಬ ವರದಿಗಳ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ತಳಮಟ್ಟದ ಕಾರ್ಯಕರ್ತ ಕಾಂಗ್ರೆಸ್ ಅನ್ನು ತ್ಯಜಿಸಿದರೂ ಅದು ಪಕ್ಷಕ್ಕೆ ನಷ್ಟವೇ ಎಂದು ತಿವಾರಿ ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೂ ಮುನ್ನ ಆನಂದಪುರ ಸಾಹಿಬ್ ಲೋಕಸಭಾ ಸದಸ್ಯ ಟ್ವೀಟ್ ಮಾಡಿ “ನಾನು ಮಾತನಾಡಿದರೆ ಅದನ್ನು ವರಿಷ್ಠರ ವಿರುದ್ಧ ಸಿಡಿದು ನಿಂತದ್ದು ಎಂದು ಬಣ್ಣಿಸಲಾಗುತ್ತದೆ. ಸುಮ್ಮನೇ ಇದ್ದರೆ, ಅಸಹಾಯಕ ವ್ಯಾಖ್ಯಾನಿಸಲಾಗುತ್ತದೆ’ ಎಂದು ಬರೆದುಕೊಂಡಿದ್ದರು.