ಭಾರತದ “ಬಿನ್ ಲಾದನ್” ಬಲೆಗೆ; ಉಗ್ರ ಖುರೇಷಿ ಬಂಧನ
Team Udayavani, Jan 23, 2018, 6:00 AM IST
ಹೊಸದಿಲ್ಲಿ: ಟೆಕ್ಕಿಯಾಗಿದ್ದ ಆತನಿಗೆ ಇರಲು ಆಶ್ರಯ ನೀಡಿ, ಜೀವನದ ದಾರಿ ತೋರಿದ್ದು ಬೆಂಗಳೂರು. ಆದರೆ, ಆ ಮನುಷ್ಯ… ಕ್ಷಮಿಸಿ, ರಾಕ್ಷಸ, ತನಗೆ ಅನ್ನವಿಟ್ಟ ಊರಿಗೇ ಕೊಳ್ಳಿ ಇಡಲು ನಿರ್ಧರಿಸಿದ್ದ. ಆದರೆ ಅದಕ್ಕೂ ಮೊದಲು ಆತ ಬುಡಮೇಲು ಕೃತ್ಯಗಳನ್ನು ಮಾಡಿದ್ದು ಅಹ್ಮದಾಬಾದ್ ಮತ್ತು ಮುಂಬಯಿಗಳಲ್ಲಿ. ಅಲ್ಲಿ ಸರಣಿ ಬಾಂಬ್ಗಳನ್ನು ಸ್ಫೋಟಿಸಿ ನೂರಾರು ಜನರನ್ನು ಹತ್ಯೆಗೈದು, “ಭಾರತದ ಬಿನ್ ಲಾದನ್’ ಎಂದೇ ಕುಖ್ಯಾತಿ ಪಡೆದ ಖುರೇಷಿ ಅಲಿಯಾಸ್ ತೌಖೀರ್, 10 ವರ್ಷಗಳ ನಿರಂತರ ಹುಡುಕಾಟದ ಅನಂತರ ಕೊನೆಗೂ ದಿಲ್ಲಿ ಪೊಲೀಸರ ವಿಶೇಷ ದಳಕ್ಕೆ ಸಿಕ್ಕಿಬಿದ್ದಿದ್ದಾನೆ.
ದಿಲ್ಲಿಯ ಗಾಜಿಯಾಪುರಕ್ಕೆ ತನ್ನ ಸಹಚರನನ್ನು ಭೇಟಿ ಯಾಗಲು ಬರುತ್ತಿದ್ದಾನೆಂಬ ಮಾಹಿತಿ ಪಡೆದ ಪೊಲೀಸರ ತಂಡ, ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈತನಿಂದ 9 ಎಂಎಂ ಪಿಸ್ತೂಲು, 5 ಕ್ಯಾಟ್ರಿìಡ್ಜ್ ಗನ್ನು ವಶಪಡಿಸಿಕೊಳ್ಳಲಾಗಿದೆ.
ಇಂಡಿಯನ್ ಮುಜಾಹಿದೀನ್ (ಐಎಂ) ಸದಸ್ಯನಾಗಿದ್ದ ಖುರೇಷಿ, 2006ರಲ್ಲಿ ನಡೆದಿದ್ದ ಮುಂಬಯಿ ರೈಲು ಸ್ಫೋಟ, 2008ರಲ್ಲಿ ನಡೆದಿದ್ದ ಅಹ್ಮದಾಬಾದ್ ಸರಣಿ ಸ್ಫೋಟಗಳ ಮಾಸ್ಟರ್ ಪ್ಲಾ éನ್ ಮಾಡಿದ್ದ. ಈ ಕೃತ್ಯಗಳನ್ನು ಎಸಗಿದ ತತ್ಕ್ಷಣ, ನಕಲಿ ದಾಖಲೆ ಸೃಷ್ಟಿಸಿ, ನೇಪಾಲದಲ್ಲಿ “ಸೆಟಲ್’ ಆಗಿಬಿಟ್ಟಿದ್ದ. ಮಾರುವೇಷ ಹಾಕುವುದರಲ್ಲಿ ನಿಸ್ಸೀಮನಾಗಿದ್ದರಿಂದ ಈತ ಹಲವಾರು ಬಾರಿ ಪೊಲೀಸರ ಕಣ್ಣಿನಿಂದ ಬಚಾವಾಗಿದ್ದ. ಹತ್ತು ವರ್ಷಗಳಿಂದ ಈತನ ಬೆನ್ನು ಬಿದ್ದಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಈತನ ತಲೆಗೆ 4 ಲಕ್ಷ ರೂ. ಬೆಲೆ ಕಟ್ಟಿತ್ತು.
ಯಾರೀತ ಖುರೇಷಿ ?
ಪಾತಕಿ ಖುರೇಷಿ, ಮಧ್ಯಪ್ರದೇಶದ ರಾಂಪುರದವನು. ವಿದ್ಯಾರ್ಥಿಯಾಗಿದ್ದಾಗಲೇ ಸಿಮಿ ಕಾರ್ಯಕರ್ತ. ಅಹ್ಮದಾ ಬಾದ್, ಮುಂಬಯಿ ಸ್ಫೋಟಗಳಷ್ಟೇ ಅಲ್ಲದೆ ದಿಲ್ಲಿ, ಬೆಂಗ ಳೂರುಗಳಲ್ಲಿ ಈ ಹಿಂದೆ ನಡೆದ ಕೆಲವು ವಿಧ್ವಂಸಕ ಕೃತ್ಯಗಳಿಗೂ ಈತನ ನಂಟು ಇತ್ತು. ವಿದೇಶಕ್ಕೆ ಹೋಗಿ ವಾಪಸಾಗಿದ್ದ ಈತ ಮತ್ತೆ ಭಾರತದಲ್ಲಿ ಸಿಮಿ, ಐಎಂ ಉಗ್ರ ಸಂಘಟನೆಗಳನ್ನು ಪುನಶ್ಚೇತನ ಮಾಡುವ ನಿಟ್ಟಿನಲ್ಲಿ ಕೆಲಸ ಆರಂಭಿಸಿದ್ದ.
ರಿಯಾಜ್ ಭಟ್ಕಳ್ ನಂಟು
ಒಂದು ಕಾಲದಲ್ಲಿ ಶಾಲಾ ಶಿಕ್ಷಕನಾಗಿ, ಅನಂತರ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಿದ್ದ ಖುರೇಷಿಗೆ ಉಗ್ರ ರಿಯಾಜ್ ಭಟ್ಕಳ್ ಜತೆಗೂ ನಂಟಿತ್ತು. 2015ರ ಆರಂಭದಲ್ಲಿ ಖುರೇಷಿ ನೇಪಾಲದಲ್ಲಿದ್ದಾಗ ಭಟ್ಕಳ್ ಜತೆ ಸಂಪರ್ಕವಿಟ್ಟುಕೊಂಡಿದ್ದ. ಅಲ್ಲೇ ಆತ ನೇಪಾಲದ ಮತದಾರರ ಪಟ್ಟಿಯಲ್ಲಿ ಹೆಸರೂ ಸೇರಿಸಿಕೊಂಡಿದ್ದ. ಪಾಸ್ಪೋರ್ಟ್ ಪಡೆದಿದ್ದ. 2015ರ ಫೆಬ್ರವರಿ- ಮಾರ್ಚ್ನಲ್ಲಿ ಭಟ್ಕಳ್ನ ಸೂಚನೆ ಮೇರೆಗೆ ಖುರೇಷಿ ಸೌದಿ ಅರೇಬಿಯಾಗೆ ಹೋಗಿದ್ದ.