ED ಕಾರ್ಯಾಚರಣೆ ಬಿರುಸು; ಪ್ರತ್ಯಕ್ಷವಾದ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್
ಶಿಬು ಸೊರೇನ್ ಪುತ್ರ ವೀರ.... ಅಜಿತ್ ಪವಾರ್ ಅಥವಾ ನಿತೀಶ್ ಕುಮಾರ್ ಅಲ್ಲ: ಜೆಎಂಎಂ ಆಕ್ರೋಶ
Team Udayavani, Jan 30, 2024, 5:30 PM IST
ಹೊಸದಿಲ್ಲಿ/ರಾಂಚಿ: ಹಣಕಾಸು ಅಕ್ರಮಕ್ಕೆ ಸಂಬಂಧಿಸಿ ಝಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಹೊಸದಿಲ್ಲಿಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ವಿಚಾರಣೆಗೆ ಗೈರು ಹಾಜರಾಗಿ ನಾಪತ್ತೆಯಾಗಿದ್ದಾರೆ ಎಂಬ ವದಂತಿಗಳ ಬೆನ್ನಲ್ಲೇ ಮಂಗಳವಾರ ಪ್ರತ್ಯಕ್ಷರಾಗಿದ್ದು ರಾಂಚಿಯಲ್ಲಿ ಮಹಾತ್ಮ ಗಾಂಧಿಯವರ ಪುಣ್ಯತಿಥಿಯಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಸೊರೇನ್ ಅವರು ಪಕ್ಷದ ಪ್ರಮುಖರೊಂದಿಗೆ ಸಭೆಯೊಂದನ್ನು ನಡೆಸಿ ಮಹತ್ವದ ಮಾತುಕತೆಯನ್ನೂ ನಡೆಸಿ ರಾಜಕೀಯ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಎಲ್ಲಿಯಾದರೂ ಬಂಧನವಾದಲ್ಲಿ ಪರ್ಯಾಯ ವ್ಯವಸ್ಥೆಯ ಕುರಿತೂ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ಇ.ಡಿ. ಅಧಿಕಾರಿಗಳು ಹೊಸದಿಲ್ಲಿಯಲ್ಲಿರುವ ಹೇಮಂತ್ ಸೊರೇನ್ ಅವರ ನಿವಾಸದಲ್ಲಿ ಸೋಮವಾರ ತಡರಾತ್ರಿಯ ವರೆಗೆ ಶೋಧ ನಡೆಸಿ ಎರಡು ಐಷಾರಾಮಿ ಕಾರುಗಳನ್ನು , 36 ಲಕ್ಷ ರೂ. ಹಣ ಮತ್ತು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನೊಂದೆಡೆ ಸಿಎಂ ಹೇಮಂತ್ ಸೊರೆನ್ ಅವರ ರಾಂಚಿ ನಿವಾಸದ 100 ಮೀಟರ್ ಸುತ್ತಳತೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
#WATCH | Ranchi | Jharkhand CM Hemant Soren pays tribute to Mahatma Gandhi, on his death anniversary. pic.twitter.com/7Uo0GhfXQG
— ANI (@ANI) January 30, 2024
ಜೆಎಂಎಂ ಆಕ್ರೋಶ
ಜೆಎಂಎಂ ಪ್ರಧಾನ ಕಾರ್ಯದರ್ಶಿ ಸುಪ್ರಿಯೋ ಭಟ್ಟಾಚಾರ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ”ಜನವರಿ 31 ರಂದು ಇಡಿ ಕರೆ ಮಾಡಿದಾಗ ಯಾರ ಸೂಚನೆಯ ಮೇರೆಗೆ ಇಡಿ ದೆಹಲಿಯಲ್ಲಿರುವ ಹೇಮಂತ್ ಸೊರೇನ್ ಮನೆಗೆ ಹೋಗಿತ್ತು? 36 ಲಕ್ಷ ಜಪ್ತಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಅವರಿಲ್ಲದಾಗ ಯಾರಿಗಾದರೂ ಅವರ ಮನೆಗೆ ಪ್ರವೇಶಿಸಲು ಅಧಿಕಾರವಿದೆಯೇ? ಅವರನ್ನು ಕ್ರಿಮಿನಲ್ನಂತೆ ನಡೆಸಿಕೊಳ್ಳಲಾಗುತ್ತಿದೆ. ಹೇಮಂತ್ ಸೋರೆನ್ ಅವರು ಹಿಮಂತ ಬಿಸ್ವ ಶರ್ಮ, ಅಜಿತ್ ಪವಾರ್ ಅಥವಾ ನಿತೀಶ್ ಕುಮಾರ್ ಅಲ್ಲ. ಅವರು ವೀರ ಶಿಬು ಸೊರೇನ್ ಅವರ ಪುತ್ರ” ಎಂದು ಕಿಡಿ ಕಾರಿದ್ದಾರೆ.
ಸಿಎಂ ತಮ್ಮ ವೈಯಕ್ತಿಕ ಕಾರಣಕ್ಕೆ ದೆಹಲಿಗೆ ಹೋಗಿದ್ದು, ಕೆಲಸ ಮುಗಿದ ನಂತರ ವಾಪಸ್ ಬರುತ್ತಾರೆ ಎಂದು ನಿನ್ನೆಯೇ ಹೇಳಿದ್ದೆ. ಜೆಪಿ ನೀಡಿದ ಹೇಳಿಕೆಗಳು CrPC 499 ಗೆ ಸಂಪೂರ್ಣವಾಗಿ ಅನ್ವಯಿಸುತ್ತವೆ, ಅಂದರೆ ಮಾನನಷ್ಟ, ನಾವು ಶೀಘ್ರದಲ್ಲೇ ಪ್ರಮುಖ ವಿರೋಧ ಪಕ್ಷದ ಅಧ್ಯಕ್ಷ ಮತ್ತು ಸಂಸದರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸುತ್ತೇವೆ ಎಂದು ಹೇಳಿದ್ದಾರೆ.
JMM ನಾಯಕ ಮನೋಜ್ ಪಾಂಡೆ ಸುದ್ದಿಗಾರರೊಂದಿಗೆ ಮಾತನಾಡಿ “ಇವೆಲ್ಲವೂ ಬಹಿರಂಗಪಡಿಸಲಾಗದ ತಂತ್ರಗಳು. ಸರ್ವಾಧಿಕಾರದ ವಿರುದ್ಧ ಹೋರಾಡಲು, ನಾವು ಘನ ಕಾರ್ಯತಂತ್ರದೊಂದಿಗೆ ಮುನ್ನಡೆಯುತ್ತಿದ್ದೇವೆ. ದಯವಿಟ್ಟು ನಿರೀಕ್ಷಿಸಿ. ಬ್ರಿಜ್ ಭೂಷಣ್ ಸಿಂಗ್ ನಾಪತ್ತೆಯಾಗಿದ್ದ ವೇಳೆ ಬಿಜೆಪಿಯವರು ಎಂದಾದರೂ ದೂರು ದಾಖಲಿಸಿದ್ದರೇ? ಎಂದು ಪ್ರಶ್ನಿಸಿದರು.