ಶ್ರೀನಗರದಲ್ಲಿ ಉಗ್ರರ ದಾಳಿ: ಓರ್ವ ಜವಾನ ಹುತಾತ್ಮ, ಇಬ್ಬರು ಗಂಭೀರ
Team Udayavani, Jun 24, 2017, 7:08 PM IST
ಹೊಸದಿಲ್ಲಿ : ಶ್ರೀನಗರ – ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿನ ಪಂಥಾ ಚೌಕ್ ಪ್ರದೇಶದಲ್ಲಿ ಇಂದು ಸಂಜೆ ಭಾರೀ ಶಸ್ತ್ರ ಸಜ್ಜಿತ ಉಗ್ರರು ಸಿಆರ್ಪಿಎಫ್ ಗಸ್ತು ವಾಹನದ ಮೇಲೆ ಹೊಂಚು ದಾಳಿ ನಡೆಸಿದ ಪರಿಣಾಮವಾಗಿ ಓರ್ವ ಜವಾನ ಹುತಾತ್ಮನಾಗಿ ಇತರ ಇಬ್ಬರು ಜವಾನರು ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಎಕೆ ರೈಫಲ್ಗಳನ್ನು ಹೊಂದಿದ್ದ ಭಾರೀ ಶಸ್ತ್ರ ಸಜ್ಜಿತ ಉಗ್ರರು 29 ಬೆಟಾಲಿಯನ್ ಸಿಆರ್ಪಿಎಫ್ ಗೆ ಸೇರಿದ ಗಸ್ತು ವಾಹನ ಮೇಲೆ ಇಂದು ಸಂಜೆ 6.15ರ ಹೊತ್ತಿಗೆ ಉಗ್ರರು ಯದ್ವಾತದ್ವಾ ಗುಂಡು ಹಾರಿಸಿದರು. ಶ್ರೀನಗರದಲ್ಲಿನ ಪಂಥಾ ಚೌಕ್ ಬಸ್ ನಿಲ್ದಾಣದ ಸಮೀಪ ಈ ದಾಳಿ ನಡೆಯಿತು. ಉಗ್ರರ ದಾಳಿಯಲ್ಲಿ ಇಬ್ಬರು ಜವಾನರು ಗಂಭೀರವಾಗಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಾಳು ಜವಾನನ್ನು ಬದಾಮಿಬಾಗ್ನಲ್ಲಿನ ಮಿಲಿಟರಿ ಆಸ್ಪತ್ರೆಗೆ ಸೇರಿಸಲಾಗಿದೆ. ಹುತಾತ್ಮನಾದ ಜವಾನನನ್ನು ಸಬ್ ಇನ್ಸ್ಪೆಕ್ಟರ್ ಸಾಹಬ್ ಶುಕ್ಲಾ ಎಂದು ಗುರುತಿಸಲಾಗಿದೆ.
ದಾಳಿಯ ಬಳಿಕ ಅಡಗಿಕೊಂಡಿರುವ ಉಗ್ರರನ್ನು ಪತ್ತೆ ಹಚ್ಚಲು ಪೊಲೀಸರು, ಅರೆ ಸೈನಿಕ ದಳದ ಸಿಬಂದಿಗಳು ಹಾಗೂ ಭದ್ರತಾ ಪಡೆಗಳು ಇಡಿಯ ಪ್ರದೇಶವನ್ನು ಸುತ್ತುವರಿದಿದ್ದು ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಇದೇ ವೇಳೆ ಶ್ರೀನಗರ – ಜಮ್ಮು ನ್ಯಾಶನಲ್ ಹೈವೇ ಯನ್ನು ಮುಚ್ಚಲಾಗಿದೆ.