ಕರ್ನಾಟಕಕ್ಕೆ ಮಹದಾಯಿ ನೀರು ನೀಡಲು ಅಭ್ಯಂತರವಿಲ್ಲ: ಬಿಜೆಪಿ
Team Udayavani, Jan 6, 2018, 7:40 AM IST
ಪಣಜಿ: ಮಹದಾಯಿ ನದಿ ನೀರನ್ನು ಕರ್ನಾಟಕಕ್ಕೆ ಕುಡಿಯುವ ಬಳಕೆಗೆ ನೀಡಲು ಯಾವುದೇ ಅಭ್ಯಂತರವಿಲ್ಲ. ಆದರೆ ಮಹದಾಯಿ ನೀರನ್ನು ಮಲಪ್ರಭಾ ನದಿಗೆ ಜೋಡಣೆ ಮಾಡಲು ವಿರೋಧವಿದೆ ಎಂದು ಗೋವಾ ಬಿಜೆಪಿ ಅಭಿಪ್ರಾಯಪಟ್ಟಿದೆ.
ಪಣಜಿಯಲ್ಲಿ ಬಿಜೆಪಿ ಪ್ರಮುಖ ದತ್ತಪ್ರಸಾದ ನಾಯ್ಕ, ಶಾಸಕ ಸುಭಾಷ ನಾಯ್ಕ, ಕಿರಣ ಕಾಂದೋಳಕರ ಜಂಟಿಯಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹದಾಯಿ ನದಿ ನೀರು ಹರಿಯುವ ಭಾಗದಲ್ಲಿ 35 ಕಿಮೀವರೆಗೆ ಮಹದಾಯಿ ನದಿ ನೀರನ್ನು ಬಳಕೆ ಮಾಡಲಾಗುತ್ತಿದ್ದರೆ ಅಡ್ಡಿಯಿಲ್ಲ. ಆದರೆ ಮಹದಾಯಿ ನದಿ ನೀರನ್ನು ಮಲಪ್ರಭೆಗೆ ತಿರುಗಿಸಲು ಸಾಧ್ಯವಿಲ್ಲ. ಅದಕ್ಕೆ ನಮ್ಮ ವಿರೋಧವಿದೆ. ಮಹದಾಯಿ ನದಿ ನೀರನ್ನು ಕರ್ನಾಟಕ ಕುಡಿಯುವ ಬಳಕೆಗೆ ಮಾತ್ರವಲ್ಲದೆಯೇ ಕರ್ನಾಟಕದ ವಿವಿಧ ಭಾಗಗಳಿಗೆ ವಿವಿಧ ಉದ್ದೇಶಗಳಿಗಾಗಿ ಬಳಕೆ ಮಾಡಲು ಮಲಪ್ರಭೆಗೆ ಜೋಡಿಸಲು ಮುಂದಾಗಿರುವುದನ್ನು ವಿರೋಧಿ ಸಲಾಗುವುದು ಎಂದರು.
ಗೋವಾದಲ್ಲಿ ಕರ್ನಾಟಕಕ್ಕೆ ಮಹದಾಯಿ ನದಿ ನೀರು ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿಯಲ್ಲಿಯೇ ಪರ ಮತ್ತು ವಿರೋಧದ ಅಭಿಪ್ರಾಯ ವ್ಯಕ್ತವಾಗುತ್ತಿರುವುದು ಹಲವು ಪ್ರಶ್ನೆ ಉದ್ಭವಿಸುವಂತಾಗಿದೆ.