ಸಿಪಿಎಂ ಸದಸ್ಯನ ಹತ್ಯೆ ಪ್ರಕರಣ: ಆರೆಸ್ಸೆಸ್ನ 13 ಕಾರ್ಯಕರ್ತರ ಖುಲಾಸೆ
Team Udayavani, Jul 13, 2022, 6:02 PM IST
ಕೊಚ್ಚಿ: 2008ರಲ್ಲಿ ತಿರುವನಂತಪುರಂನಲ್ಲಿ ನಡೆದ ಸಿಪಿಎಂ ಕಾರ್ಯಕರ್ತರೊಬ್ಬರ ಹತ್ಯೆ ಪ್ರಕರಣದ ಆರೋಪಿಗಳಾಗಿದ್ದ 13 ಮಂದಿ ಆರೆಸ್ಸೆಸ್ ಕಾರ್ಯಕರ್ತರನ್ನು ಕೇರಳ ಹೈಕೋರ್ಟ್ ಬುಧವಾರ ಖುಲಾಸೆಗೊಳಿಸಿದೆ.
ಆರೋಪಿಗಳ ವಿರುದ್ಧ ಆರೋಪ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ಸಂಪೂರ್ಣವಾಗಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಎಲ್ಲ 13 ಮಂದಿಯನ್ನೂ ದೋಷಮುಕ್ತಗೊಳಿಸಲಾಗಿದೆ ಎಂದು ನ್ಯಾ.ಕೆ. ವಿನೋದ್ ಚಂದ್ರನ್ ಮತ್ತು ನ್ಯಾ.ಸಿ. ಜಯಚಂದ್ರನ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.
ಆರೆಸ್ಸೆಸ್ ಕಾರ್ಯಕರ್ತರನ್ನು ದೋಷಿಗಳು ಎಂದು ಘೋಷಿಸಿದ್ದ ಸೆಷನ್ಸ್ ಕೋರ್ಟ್ನ ತೀರ್ಪು ಪ್ರಶ್ನಿಸಿ ಅವರು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. “ಮತ್ತೊಂದು ಜೀವ ಬಲಿಯಾಯಿತು, ಮತ್ತೊಮ್ಮೆ ಪ್ರಾಸಿಕ್ಯೂಷನ್ ವಿಫಲವಾಯಿತು. ಎರಡು ಗುಂಪುಗಳ ನಡುವೆ ರಾಜಕೀಯ ವೈಷಮ್ಯವಿತ್ತು ಎಂಬುದನ್ನು ಹೊರತುಪಡಿಸಿ, ಸಿಪಿಎಂ ಕಾರ್ಯಕರ್ತ ವಿ.ವಿ. ವಿಷ್ಣು ಅವರ ಹತ್ಯೆಗೆ ಸಂಬಂಧಿಸಿ ಆರೋಪಿಗಳ ವಿರುದ್ಧ ಸೂಕ್ತ ಪುರಾವೆಗಳನ್ನು ಒದಗಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ.
ಹೀಗಾಗಿ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸುತ್ತಿದ್ದೇವೆ’ ಎಂದು ಹೈಕೋರ್ಟ್ ನ್ಯಾಯಪೀಠ ಹೇಳಿದೆ.