ವಿಚ್ಛೇದನ ನಿರ್ಧಾರ ಬೆಂಬಲಿಸದಿದ್ದರೆ ಮನೆಗೆ ಮರಳೆನು: ಲಾಲು ಪುತ್ರ
Team Udayavani, Nov 9, 2018, 7:26 PM IST
ಪಟ್ನಾ : ಆರು ತಿಂಗಳ ಹಿಂದೆ ಮದುವೆ ಮಾಡಿಕೊಂಡಿದ್ದ ಪತ್ನಿ ಐಶ್ವರ್ಯಾಗೆ ವಿಚ್ಛೇದನ ನೀಡುವ ತನ್ನ ನಿರ್ಧಾರವನ್ನು ಮನೆಯವರು ಬೆಂಬಲಿಸುವ ತನಕ ತಾನು ಮನೆಗೆ ಮರಳುವುದಿಲ್ಲ ಎಂದು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಮಗ ಹಾಗೂ ಶಾಸಕ ತೇಜ್ ಪ್ರತಾಪ್ ಯಾದವ್ ಹೇಳಿದ್ದಾರೆ.
ತೇಜ್ ಪ್ರಕೃತ ಹರಿದ್ವಾರದಲ್ಲಿದ್ದು ಮನಃಶಾಂತಿಯನ್ನು ಅರಸುತ್ತಿದ್ದಾರೆ. ಮಗನ ವಿವಾಹ ವಿಚ್ಛೇದನ ನಿರ್ಧಾರದಿಂದ ಅಪ್ಪ ಲಾಲು ಯಾದವ್ ತುಂಬ ವಿಚಲಿತರಾಗಿದ್ದಾರೆ ಎಂದು ಕುಟುಂಬ ಮೂಲಗಳು ಹೇಳಿವೆ.
ಪ್ರಾದೇಶಿಕ ಸುದ್ದಿ ವಾಹಿನಿ ಜತೆಗೆ ಟೆಲಿಫೋನ್ ಮೂಲಕ ಮಾತನಾಡಿದ ತೇಜ್ ಪ್ರತಾಪ್, ತನ್ನ ಕಿರಿಯ ಸಹೋದರ ತೇಜಸ್ವಿ ಯಾದವ್ಗೆ ಹುಟ್ಟು ಹಬ್ಬದ ಶುಭಾಶಯ ಹೇಳಿದ್ದಾರೆ.
ಸಹೋದರ ತೇಜಸ್ವಿ ಯಾದವ್ ತನ್ನ ಸಹೋದರಿಯರನ್ನು ಕಾಣಲು ದಿಲ್ಲಿಗೆ ಹೋಗಿದ್ದು ಅಲ್ಲೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ಕಾರಣ “ನಾನು ಅಲ್ಲಿಗೆ ಬಂದು ನಿಮ್ಮನ್ನು ಸೇರಲು ಅಸಮರ್ಥನಾಗಿದ್ದೇನೆ’ ಎಂದು ತೇಜ್ ಪ್ರತಾಪ್ ತಿಳಿಸಿದ್ದಾರೆ.