ಹಿಂದಿನ ಸಂಕುಚಿತ ದೃಷ್ಟಿಕೋನಗಳಿಂದ ದೇಶ ಮುಕ್ತವಾಗಲಿ: ಮೋದಿ
Team Udayavani, Dec 27, 2022, 1:28 AM IST
ಹೊಸದಿಲ್ಲಿ: ದೇಶವನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊ ಯ್ಯಲು ಭಾರತವು ಹಿಂದಿನ ಸಂಕುಚಿತ ದೃಷ್ಟಿಕೋನಗಳಿಂದ ಮುಕ್ತವಾಗಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಇಸ್ಲಾಂಗೆ ಮತಾಂತರವಾಗಲು ಒಪ್ಪದೇ ಔರಂಗಜೇಬ್ನ ಕತ್ತಿಗೆ ಬಲಿಯಾದ ಗುರು ಗೋವಿಂದ ಸಿಂಗ್ ಅವರ ವೀರ ಪುತ್ರರಾದ ಜೊರಾವರ್ ಸಿಂಗ್ ಮತ್ತು ಫತೇಹ್ಸಿಂಗ್ ಅವರ ಗೌರವಾರ್ಥ ನಡೆದ “ವೀರ ಬಲ ದಿವಸ್’ ಸಮಾರಂಭದಲ್ಲಿ ಅವರು ಮಾತನಾಡಿದರು.
ಹುತಾತ್ಮರಾದ ಇಬ್ಬರು ಬಾಲಕರ ಶೌರ್ಯವನ್ನು ಉಲ್ಲೇಖೀಸಿ ಮಾತನಾಡಿದ ಅವರು, “ಒಂದೆಡೆ ಭಯೋತ್ಪಾದನೆ ಮತ್ತೊಂದೆಡೆ ಆಧ್ಯಾತ್ಮಿಕತೆ ಇತ್ತು. ಒಂದೆಡೆ ಕೋಮು ಗಲಭೆ ಮತ್ತೂಂದೆಡೆ ಉದಾರವಾದ. ಒಂದೆಡೆ ಲಕ್ಷಾಂತರ ಸೈನಿಕರ ಪಡೆ, ಆದರೆ “ವೀರ್ ಸಾಹಿಬ್ಜಾದೆ’ ಮಾತ್ರ ಕದಲಲಿಲ್ಲ,’ ಎಂದರು.
“ಔರಂಗಜೇಬ್ ಮತ್ತು ಅವನ ಜನರು ಕತ್ತಿಯ ಆಧಾರದ ಮೇಲೆ ಗುರು ಗೋವಿಂದ್ ಸಿಂಗ್ ಅವರ ಮಕ್ಕಳನ್ನು ಮತಾಂತರಿಸಲು ಬಯಸಿದ್ದರು. ಆದರೆ ಸಾಧ್ಯವಾಗದೇ ಇಬ್ಬರು ಮುಗ್ಧ ಮಕ್ಕಳನ್ನು ಕೊಲ್ಲಲು ನಿರ್ಧರಿಸಿದರು. ಔರಂಗಜೇಬನ ಭಯೋತ್ಪಾದನೆಯ ವಿರುದ್ಧ ಮತ್ತು ಭಾರತವನ್ನು ಬದಲಾಯಿಸುವ ಅವನ ಯೋಜನೆಗಳ ವಿರುದ್ಧ ಗುರು ಗೋವಿಂದ್ ಸಿಂಗ್ ಪರ್ವತದಂತೆ ನಿಂತರು,’ ಎಂದು ಶ್ಲಾಘಿಸಿದರು. ಗುರು ಗೋವಿಂದ್ ಸಿಂಗ್ ಅವರ ಮಕ್ಕಳ ಬಲಿದಾನದ ಗೌರವಾರ್ಥ ಡಿ.26 ಅನ್ನು “ವೀರ ಬಲ ದಿವಸ್’ ಆಗಿ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಘೋಷಿಸಿದ್ದರು.