ಧಾರ್ಮಿಕ ಸ್ಥಳಗಳ ಧ್ವನಿವರ್ಧಕಗಳು ಶಾಲೆಗಳಿಗೆ ಹಸ್ತಾಂತರ
Team Udayavani, May 22, 2022, 10:31 PM IST
ಲಕ್ನೋ: ಉತ್ತರ ಪ್ರದೇಶದಲ್ಲಿ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆಗೆ ನಿಷೇಧ ಹೇರಿದ ನಂತರ ಧಾರ್ಮಿಕ ಸ್ಥಳಗಳಿಂದ ಕೆಳಗಿಳಿಸಲಾಗುತ್ತಿರುವ ಧ್ವನಿವರ್ಧಕಗಳನ್ನು ಸರ್ಕಾರಿ ಶಾಲೆಗಳಿಗೆ ವಿತರಿಸಲಾಗುತ್ತಿದೆ.
ಗೋರಖ್ಪುರ, ಸಂಗಂ ಜಿಲ್ಲೆಗಳಲ್ಲಿ ಈಗಾಗಲೇ ಈ ಕಾರ್ಯ ಆರಂಭವಾಗಿದ್ದು, ಮುಂದಿನ ವಾರದಲ್ಲಿ ತಾವೂ ಈ ಕೆಲಸ ಮಾಡುವುದಾಗಿ ಲಕ್ನೋ ಜಿಲ್ಲಾಧಿಕಾರಿ ಅಭಿಷೇಕ್ ಪ್ರಕಾಶ್ ತಿಳಿಸಿದ್ದಾರೆ.
ಈ ರೀತಿ ಹಂಚಲಾಗುತ್ತಿರುವ ಧ್ವನಿವರ್ಧಕಗಳನ್ನು ಶಾಲೆಗಳು ಸ್ಥಳೀಯರಿಗೆ ಕೆಲವು ಅಗತ್ಯ ಮಾಹಿತಿ ಹಂಚಲು, ಮಕ್ಕಳನ್ನು ಶಾಲೆಗೆ ಬರುವಂತೆ ಉತ್ತೇಜಿಸಲು, ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಬಳಸಲಿವೆ ಎಂದು ತಿಳಿಸಲಾಗಿದೆ. ನಗರ ಕ್ಷೇತ್ರದ ಗೋರಖ್ನಾಥ ಕನ್ಯಾ ಶಾಲೆಯಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು ಶಾಲೆಗೆ ಧ್ವನಿವರ್ಧಕ ಹಸ್ತಾಂತರಿಸುತ್ತಿರುವ ಫೋಟೋ ಹಂಚಿಕೊಂಡಿರುವ ಬಿಜೆಪಿ ಸಂಸದ ರವಿ ಕಿಶನ್, “ಗೋರಖ್ನಾಥ ದೇಗುಲದಿಂದ ತೆಗೆಯಲಾದ ಧ್ವನಿವರ್ಧಕವನ್ನು ಶಾಲೆಗೆ ಕೊಡುತ್ತಿರುವುದು ಪ್ರಶಂಸನೀಯ’ ಎಂದು ಬರೆದುಕೊಂಡಿದ್ದಾರೆ.
ಪ್ರಯಾಗ್ರಾಜ್ ಜಿಲ್ಲೆಯಲ್ಲಿ ಮಸೀದಿಗಳು ಮತ್ತು ದೇಗುಲಗಳ ಮುಖ್ಯಸ್ಥರು, ಧಾರ್ಮಿಕ ಸ್ಥಳದ ಧ್ವನಿವರ್ಧಕ ಮಾತ್ರವಲ್ಲದೆ ಹೆಚ್ಚುವರಿ ಧ್ವನಿವರ್ಧಕಗಳನ್ನೂ ಶಾಲೆಗಳಿಗೆ ಕೊಡುಗೆ ನೀಡಲಾರಂಭಿಸಿದ್ದಾರೆ.