ಭೂಸೇನೆಗೆ ಎಂಜಿನಿಯರ್ ಮುಖ್ಯಸ್ಥ; ಮೊದಲ ಬಾರಿಗೆ ತಾಂತ್ರಿಕ ಹಿನ್ನೆಲೆಯುಳ್ಳ ಅಧಿಕಾರಿ ನೇಮಕ
ಮಾಸಾಂತ್ಯಕ್ಕೆ ಹಾಲಿ ಮುಖ್ಯಸ್ಥ ಮೇ.ಜ.ನರವಾಣೆ ನಿವೃತ್ತಿ
Team Udayavani, Apr 19, 2022, 7:30 AM IST
ನವದೆಹಲಿ: ಭೂಸೇನೆಯ 29ನೇ ಮುಖ್ಯಸ್ಥರಾಗಿ ಲೆ.ಜ.ಮನೋಜ್ ಪಾಂಡೆ ನೇಮಕಗೊಳ್ಳಲಿದ್ದಾರೆ. ಇದೇ ಮೊದಲ ಬಾರಿಗೆ ಕಾರ್ಪ್ಸ್ ಆಫ್ ಎಂಜಿನಿಯರ್ಸ್ನ ಹಿರಿಯ ಅಧಿಕಾರಿ ಭೂಸೇನೆಯ ಮುಖ್ಯಸ್ಥರಾಗಲಿದ್ದಾರೆ.
ಮಾಸಾಂತ್ಯಕ್ಕೆ ಭೂಸೇನೆಯ ಹಾಲಿ ಮುಖ್ಯಸ್ಥ ಜ.ಮನೋಜ್ ಮುಕುಂದ್ ನರವಾಣೆ ನಿವೃತ್ತಿಯಾಗಲಿದ್ದಾರೆ.
ಹೀಗಾಗಿ, ಹೊಸ ಮುಖ್ಯಸ್ಥರ ಆಯ್ಕೆಯನ್ನು ಮಾಡಲಾಗಿದೆ ಎಂದು ರಕ್ಷಣಾ ಸಚಿವಾಲಯ ಸೋಮವಾರ ತಿಳಿಸಿದೆ.
39 ವರ್ಷಗಳ ಕಾಲ ಭೂಸೇನೆಯ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಅವರಿಗೆ ಇದೆ. ದೇಶದ ಪಶ್ಚಿಮ ಭಾಗದಲ್ಲಿ ಎಂಜಿನಿಯರ್ ಬ್ರಿಗೇಡ್, ಎಲ್ಒಸಿಯಲ್ಲಿ ಯೋಧರ ತುಕಡಿಯನ್ನು ನಿರ್ವಹಿಸಿದ ಹೆಗ್ಗಳಿಕೆ ಅವರದ್ದು. ಜತೆಗೆ ಲಡಾಖ್ನಲ್ಲಿ ಮತ್ತು ಈಶಾನ್ಯ ಭಾಗದಲ್ಲಿ ಯೋಧರ ಜತೆಗೆ ಹಲವು ಕಾರ್ಯಾಚರಣೆಗಳನ್ನು ನಡೆಸಿದ್ದಾರೆ.
ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆ ವಿದ್ಯಾರ್ಥಿಯಾಗಿರುವ ಅವರು, 1982ರಲ್ಲಿ ಕಾರ್ಪ್ಸ್ ಆಫ್ ಎಂಜಿನಿಯರ್ಸ್ಗೆ ಸೇರ್ಪಡೆಯಾದರು.
ಇದನ್ನೂ ಓದಿ:ಛತ್ತೀಸ್ಗಢ: ನಕ್ಸಲರ ದಾಳಿಯಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿಗೆ ಗಾಯ
2001ರ ಡಿಸೆಂಬರ್ನಲ್ಲಿ ಸಂಸತ್ ಭವನದ ಮೇಲೆ ಪಾಕಿಸ್ತಾನದ ಉಗ್ರರು ದಾಳಿ ನಡೆಸಿದ ಬಳಿಕ ಎಲ್ಒಸಿಯ ಪಲ್ಲನ್ವಾಲಾ ಎಂಬಲ್ಲಿ ನಡೆಸಲಾಗಿದ್ದ “ಆಪರೇಷನ್ ಪರಾಕ್ರಮ್’ನ ನೇತೃತ್ವ ವಹಿಸಿದ್ದರು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದ ಸೇನಾ ಘಟಕದ ಕಮಾಂಡರ್ ಕೂಡ ಆಗಿದ್ದರು.
ಏನಿದು ಕಾರ್ಪ್ಸ್ಆಫ್ ಎಂಜಿನಿಯರ್ಸ್?
– ಇದು ಭೂಸೇನೆಯ ಹಳೆಯ ಭಾಗ
– ಸೇನಾಪಡೆಗಳಿಗೆ ಮೂಲ ಸೌಕರ್ಯ ನಿರ್ಮಾಣ ಇದರ ಕೆಲಸ
– ಪ್ರಾಕೃತಿಕ ವಿಪತ್ತುಗಳ ಸಂದರ್ಭದಲ್ಲಿ ನೆರವು
– ಯುದ್ಧ, ಸೇನಾ ಕಾರ್ಯಾಚರಣೆಗಳ ಸಂದರ್ಭದಲ್ಲಿ ಹೆಲಿಪ್ಯಾಡ್, ತುರ್ತು ಸೇತುವೆ, ರಸ್ತೆಗಳ ನಿರ್ಮಾಣ