ಮುಳ್ಳುಹಂದಿ ಬಿಲದೊಳಕ್ಕೆ ನುಸುಳಿಬಿಟ್ಟ ಯುವಕ ಮುಂದೆನಾಯ್ತು..?
Team Udayavani, Sep 18, 2018, 12:28 PM IST
ಭೋಪಾಲ್: ಒಬ್ಬೊಬ್ಬರಿಗೆ ಒಂದೊಂದು ರೀತಿಯ ಹವ್ಯಾಸ ಹೀಗೆ ಮುಳ್ಳುಹಂದಿ ಬೇಟೆಯಾಡಲು ಹೋದ ಯುವಕನೊಬ್ಬ ಬಿಲದೊಳಕ್ಕೆ ನುಸುಳಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ನರಸಿಂಗಾಪುರ್ ಜಿಲ್ಲೆಯಲ್ಲಿ ನಡೆದಿದೆ.
32 ವರ್ಷದ ಯುವಕನನ್ನು ರಕ್ಷಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಿದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನರಸಿಂಗಾಪುರ್ ಜಿಲ್ಲೆಯ ಚವರ್ಪಥ ಗ್ರಾಮದ ಸಮೀಪದ ಕಾಡಿನಲ್ಲಿ ಮುಳ್ಳುಹಂದಿ ಬೇಟೆಯಾಡುವುದು ರೂಢಿ. ಆದರೆ ಮುಳ್ಳುಹಂದಿಯ ಬಿಲ ಕಿರಿದಾಗಿರುತ್ತದೆ. ಮನುಷ್ಯರು ಬಿಲದೊಳಕ್ಕೆ ಹೋಗಲು ಅಸಾಧ್ಯ. ಬಸಂತ್ ಕೆವಾಟ್(32) ಎಂಬ ಯುವಕ ತೆವಳಿಕೊಂಡು ಸುಮಾರು 30 ಅಡಿ ಆಳಕ್ಕೆ ಹೋಗಿದ್ದ ಎಂದು ತಹಸೀಲ್ದಾರ್ ಪಂಕಜ್ ಮಿಶ್ರಾ ಸುದ್ದಿಗಾರರ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.
ಮುಳ್ಳುಹಂದಿ ಬಿಲದೊಳಗೆ ತಿರುಗಲು ಎಲ್ಲಿಯೂ ಜಾಗವಿಲ್ಲ. ಒಂದು ವೇಳೆ ಹೇಗೋ ಬಿಳದೊಳಗೆ ಹೋದರೆ ಅಲ್ಲಿ ನೇರವಾಗಿ ಹೋಗಬೇಕೇ ವಿನಃ, ತಿರುಗಲು ಸಾಧ್ಯವಿಲ್ಲ. ಕೊನೆಗೆ ಮುಳ್ಳುಹಂದಿಯ ಬಿಲವನ್ನು ಮೇಲಿನಿಂದ ಸುಮಾರು 20 ಅಡಿ ಉದ್ದದವರೆಗೆ ಅಗೆದ ನಂತರ ಯುವಕ ಬಿಲದೊಳಗೆ ಇದ್ದಿರುವುದು ಕಾಣಿಸಿತ್ತು. ಆಸ್ಪತ್ರೆಗೆ ಕೊಂಡೊಯ್ದರು ಕೂಡಾ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.