“ಕೈ”ನಿಂದ ದುರಾಚಾರ: ಕೇಂದ್ರ ಸಚಿವ ವಿ. ಮುರಳೀಧರನ್
Team Udayavani, Oct 4, 2020, 1:08 AM IST
ತಿರುವನಂತಪುರಂ/ನವದೆಹಲಿ: “ಕೇಂದ್ರ ಸರಕಾರದ ಕೃಷಿ ಕಾಯ್ದೆಗೆ ಸಂಬಂಧಿಸಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ದುರಾಚಾರದ ಅಭಿಯಾನ ಕೈಗೊಳ್ಳುತ್ತಿದ್ದು, ಈ ಪಕ್ಷಗಳು ರೈತರ ಜೀವ ಹಾಗೂ ಜೀವನದ ಜೊತೆ ಆಟವಾಟುತ್ತಿವೆ’ ಎಂದು ಕೇಂದ್ರ ಸಚಿವ ವಿ. ಮುರಳೀಧರನ್ ಕಿಡಿಕಾರಿದ್ದಾರೆ.
ಕೇರಳದ ತಿರುವನಂತಪುರಂನಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಕೃಷಿ ಕ್ಷೇತ್ರದಲ್ಲಿ ಸುಧಾರಣೆ ತರುವ ಮೂಲಕ ರೈತರಿಗೆ ಉತ್ತಮ ಭವಿಷ್ಯ ರೂಪಿಸಲು ಪ್ರಧಾನಿ ಮೋದಿ ನೇತೃತ್ವದ ಸರಕಾರ ಯತ್ನಿಸುತ್ತಿದೆ. ಕೃಷಿಕರ ಸಬಲೀಕರಣಕ್ಕೆ ಸರಕಾರ ಬದ್ಧವಾಗಿದೆ. ಭಾರತೀಯ ರೈತರು ಕಾಂಗ್ರೆಸ್ ಮತ್ತು ಎಡಪಕ್ಷಗಳ ಗಿಮಿಕ್ಗಳಿಗೆಲ್ಲ ತಲೆಬಾಗುವುದಿಲ್ಲ. ಕೃಷಿ ಸುಧಾರಣೆಯ ಅನುಕೂಲತೆಗಳನ್ನು ಅವರು ಅರ್ಥಮಾಡಿಕೊಂಡಿದ್ದಾರೆ’ ಎಂದೂ ಹೇಳಿದ್ದಾರೆ.
ಪಂಜಾಬ್ನಲ್ಲಷ್ಟೇ ಪ್ರತಿಭಟನೆ: ಗೋವಾದ ಪಣಜಿಯಲ್ಲಿ ಶನಿವಾರ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, “ಕೃಷಿ ಕಾಯ್ದೆಗೆ ರೈತರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಪಂಜಾಬ್ ಹೊರತುಪಡಿಸಿ ದೇಶದ ಬೇರೆ ಯಾವ ಭಾಗದಲ್ಲೂ ರೈತರಿಂದ ಪ್ರತಿಭಟನೆ ನಡೆಯುತ್ತಿಲ್ಲ. ಪಂಜಾಬ್ನಲ್ಲಿ ಪ್ರತಿಭಟನೆಗೆ ಕಾಂಗ್ರೆಸ್, ಶಿರೋಮಣಿ ಅಕಾಲಿ ದಳ ಮತ್ತು ಆಪ್ ಪಕ್ಷಗಳ ರಾಜಕೀಯ ಪಿತೂರಿ ಕಾರಣ’ ಎಂದಿದ್ದಾರೆ. ಇದೇ ವೇಳೆ, ಪಂಜಾಬ್ನಲ್ಲಿ ಶನಿವಾರವೂ ರೈತರ ಪ್ರತಿಭಟನೆ ಮುಂದುವರಿದಿದೆ. ಕಾಯ್ದೆ ವಾಪಸ್ ಪಡೆಯು ವವರೆಗೂ ಧರಣಿ ನಿಲ್ಲಿಸಲ್ಲ ಎಂದೂ ಅನ್ನದಾತರು ಹೇಳಿದ್ದಾರೆ. ಈ ನಡುವೆ, ಕೃಷಿ ಕಾಯ್ದೆಯ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಆರ್ಜೆಡಿ ಸಂಸದ ಮನೋಜ್ ಜಾ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದಾರೆ. ಇತ್ತೀಚೆಗಷ್ಟೇ ಕೇರಳದ ಸಂಸದರೊಬ್ಬರು ಕಾಯ್ದೆ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ್ದರು.